ADVERTISEMENT

ಬಿಟಿಎಸ್ ರಜತೋತ್ಸವ, ಕೇಂದ್ರ ಐಟಿ ಸಚಿವ ವೈಷ್ಣವ್‌ಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 14:14 IST
Last Updated 18 ಅಕ್ಟೋಬರ್ 2022, 14:14 IST
ಕೇಂದ್ರ ಐಟಿ ಸಚಿವ ವೈಷ್ಣವ್‌, ಅಶ್ವತ್ಥ್‌ನಾರಾಯಣ್‌
ಕೇಂದ್ರ ಐಟಿ ಸಚಿವ ವೈಷ್ಣವ್‌, ಅಶ್ವತ್ಥ್‌ನಾರಾಯಣ್‌   

ನವದೆಹಲಿ: ನವೆಂಬರ್ 16ರಿಂದ ಆರಂಭವಾಗಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶದ (ಬಿಟಿಎಸ್) ರಜತೋತ್ಸವ ವರ್ಷದ ಸಮಾವೇಶವನ್ನು ಉದ್ಘಾಟಿಸುವಂತೆ ಕೋರಿ ಕೇಂದ್ರ ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಆಹ್ವಾನಿಸಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿ ಅವರು, ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರದ ಪರವಾಗಿ ಈ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಅವರು, ಬಿಟಿಎಸ್ ನ ವೈಶಿಷ್ಟ್ಯಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಜತೆಗಿದ್ದರು.

ADVERTISEMENT

ಅರುಣ್ ಸಿಂಗ್ ಗೂ ಆಹ್ವಾನ

ನ.11ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರವೇರಿಸಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭ ಮತ್ತು ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ (ಬಿಟಿಎಸ್) ಬರುವಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಅಶ್ವತ್ಥ ನಾರಾಯಣ ಆಹ್ವಾನ ನೀಡಿದ್ದಾರೆ.

ಕೆಂಪೇಗೌಡರ ಪ್ರತಿಮೆ ಅನಾವರಣದ ಅಂಗವಾಗಿ ಮೋದಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಇದರಲ್ಲಿ ಭಾಗವಹಿಸುವಂತೆ ಸಚಿವರು ಸಿಂಗ್ ಅವರಿಗೆ ತಿಳಿಸಿದರು.

ಯುದ್ಧ ಸ್ಮಾರಕಕ್ಕೆ ಭೇಟಿ

ಸಚಿವರು ಬಳಿಕ, ರಾಷ್ಟ್ರ ರಾಜಧಾನಿಯಲ್ಲಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು.

ಸ್ಮಾರಕವನ್ನು ಸಾಮಾನ್ಯ ಪ್ರವಾಸಿಗರಂತೆ ಸುತ್ತು ಹಾಕಿದ ಅವರು, ಅಲ್ಲಿಯ ಸ್ಮಾರಕಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅಲ್ಲಿಯ ವಿವರಗಳನ್ನು ಕುತೂಹಲದಿಂದ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.