ಬಿ.ವೈ. ವಿಜಯೇಂದ್ರ
ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುನಿಸಿನ ವಿಚಾರದಲ್ಲಿ ಎಲ್ಲವೂ ಸರಿಯಾಗುತ್ತದೆ. ಸರಿಪಡಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ. ಅವರು ರಾಜ್ಯಾದ್ಯಂತ ಸೈಕಲ್ ನಲ್ಲಿ ಸುತ್ತಾಡಿ ಕಟ್ಟಿದ ಫಲವಾಗಿ ಪಕ್ಷ ರಾಜ್ಯದಲ್ಲಿ ಇಂದು ಬಲಿಷ್ಠವಾಗಿದೆ. ಯಡಿಯೂರಪ್ಪ ಪಕ್ಷದ ಕುತ್ತಿಗೆ ಹಿಸುಕಿದ್ದಾರೋ ಇಲ್ಲ, ಎತ್ತರಕ್ಕೆ ಬೆಳೆಸಿದ್ದಾರೋ ಎಂಬುದು ಚುನಾವಣೆ ಮುಗಿದ ಮೇಲೆ ಗೊತ್ತಾಗುತ್ತದೆ ಎಂದರು.
ಸಾಮೂಹಿಕವಾಗಿ ಚರ್ಚೆ ಮಾಡಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲುವ ಅವಕಾಶ ಹೆಚ್ಚಿರುವುದರಿಂದ ಸಮಸ್ಯೆಗಳು, ಗೊಂದಲ ಸಹಜ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಸಮಸ್ಯೆ ಯಾಕಿಲ್ಲ ಎಂದರೆ ಅಲ್ಲಿ ಹೋದರೆ ಠೇವಣಿ ಸಿಗೋದಿಲ್ಲ ಎನ್ನುವುದು ಗೊತ್ತಿದೆ. ಅದಕ್ಕೆ ಸಮಸ್ಯೆ ಇಲ್ಲ ಎಂದರು.
ಕೋಲಾರ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡುವ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಇದು ರಾಜ್ಯದಲ್ಲಿ ಸಂಚಲನ ಉಂಟು ಮಾಡಿದೆ. ಇಡೀ ರಾಜ್ಯದಲ್ಲಿ ಮೋದಿ ಪರ ಅಲೆ ಇದೆ. ಕಾಂಗ್ರೆಸ್ ನವರು ಅಭ್ಯರ್ಥಿಗಳನ್ನು ಹಾಕಲು ಯೋಚಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.