ADVERTISEMENT

ಮೇಲ್ಮನೆಯಲ್ಲಿ ಕೋಲಾಹಲ ಸೃಷ್ಟಿಸಿದ ಮಂಗಳೂರು ಗೋಲಿಬಾರ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 13:49 IST
Last Updated 18 ಫೆಬ್ರುವರಿ 2020, 13:49 IST
   

ಬೆಂಗಳೂರು:ಮಂಗಳೂರು ಗೋಲಿಬಾರ್ ಕುರಿತು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ ಅವರು ಮಂಡಿಸಿದ ನಿಲುವಳಿ ಗೊತ್ತುವಳಿ ಮೇಲಿನ ಚರ್ಚೆ ಭಾರಿ ವಾಗ್ವಾದಕ್ಕೆ ಕಾರಣವಾಯಿತು.

ಪಾಟೀಲ ಅವರು ಸುಮಾರು ಒಂದೂವರೆ ಗಂಟೆ ಕಾಲ ಮಾತನಾಡಿ, ಸಂತ್ರಸ್ತರ ಪರಿಹಾರ ವಿಚಾರಕ್ಕೆ ಬಂದರು. ಪರಿಹಾರ ನೀಡಿ, ಮತ್ತೆ ವಾಪಸ್ ತೆಗೆದುಕೊಂಡಿದ್ದನ್ನು ಉಲ್ಲೇಖಿಸಿದರು. ಈ ಹಂತದಲ್ಲಿ ಮೃತರ ಮನೆಗೆ ಉಸ್ತುವಾರಿ ಸಚಿವರು ಹೋಗದ ವಿಚಾರವನ್ನು ಕಾಂಗ್ರೆಸ್‌ನಐವನ್ ಡಿಸೋಜಾ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಅವರು ಸಂತ್ರಸ್ತರ ಮನೆಗೆ ಹೋಗುವುದು ಬೇಡ ಎಂದು ಹೇಳಿದವರೇ ಐವನ್ ಡಿಸೋಜಾ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನೀವು ಯಾಕೆ ಅವರ ಮನೆಗೆ ಹೋಗಿಲ್ಲ ಎಂದು ಐವನ್ ಅವರು ಕೋಟ ಅವರನ್ನು ಪ್ರಶ್ನಿಸಿದರು.

ಭಯೋತ್ಪಾದಕರ ಮನೆಗೆ ಹೋಗುವುದುಂಟೇ ಎಂದು ಬಿಜೆಪಿಯ ಪಿ.ರವಿಕುಮಾರ್ ಆಡಿದ ಮಾತಿನಿಂದ ಸಿಟ್ಟಿಗೆದ್ದ ಕಾಂಗ್ರೆಸ್ ನ ಸಿ.ಎಂ.ಇಬ್ರಾಹಿಂ, ಐವನ್ ಡಿಸೋಜ , ಎಚ್ ಎಂ ರೇವಣ್ಣ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ADVERTISEMENT

ಭಾರಿ ಗದ್ದಲದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳಿಸದಾಯಿತು. ಹೀಗಾಗಿ ಸಭಾಪತಿ ಪ್ರತಾಪಚಂದ್ರ ಶೆಟ್ಡಿ ಅವರು ಸದನವನ್ನು ಅರ್ಧ ಗಂಟೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.