ನವದೆಹಲಿ/ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 22 ದಿನಗಳ ಬಳಿಕ ಸಚಿವ ಸಂಪುಟ ಸಂಖ್ಯೆಯ ಅರ್ಧದಷ್ಟು ಸ್ಥಾನಗಳ ಭರ್ತಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಪ್ಪಿಗೆ ನೀಡಿದ್ದು, ಇದೇ 20ರಂದು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಚಿವ ಸ್ಥಾನ ಕೈತಪ್ಪುವವರ ಅತೃಪ್ತಿಯನ್ನು ಶಮನ ಮಾಡುವ ಉದ್ದೇಶದಿಂದ ಆಯಕಟ್ಟಿನ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನಗಳಿಗೆ ಅದೇ ದಿನವೇ ಕೆಲವು ಶಾಸಕರನ್ನು ನಾಮನಿರ್ದೇಶನ ಮಾಡಲು ಶಾ ಅನುಮತಿ ನೀಡಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಂಗಳವಾರ ಬೆಳಿಗ್ಗೆ ನಡೆಯಲಿದ್ದು, ಮಧ್ಯಾಹ್ನದ ಬಳಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಕೇಂದ್ರದ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರನ್ನು ಶನಿವಾರ ಸಂಜೆ ಏಕಾಂಗಿಯಾಗಿ ಭೇಟಿ ಮಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದರು.
ಮುಖ್ಯಮಂತ್ರಿ ಸೇರಿದಂತೆ 34 ಸಚಿವರ ಬಲದ ಸಂಪುಟದಲ್ಲಿ, ಮೊದಲ ಹಂತದ ವಿಸ್ತರಣೆಯ ವೇಳೆ ಕೇವಲ 12 ರಿಂದ 15 ಶಾಸಕರಿಗೆ ಸಚಿವರಾಗಲು ಅವಕಾಶ ದೊರೆಯಲಿದೆ. ಅನರ್ಹ ಶಾಸಕರ ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥಗೊಂಡ ನಂತರ ಮತ್ತೊಂದು ಹಂತದ ವಿಸ್ತರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಅನುಭವ, ಸಂಘಟನಾ ಶಕ್ತಿ, ಪಕ್ಷ ಮತ್ತು ಸಂಘ ನಿಷ್ಠೆ ಆಧಾರದಲ್ಲಿ ಸಚಿವ ಸ್ಥಾನ ನೀಡುವುದು. ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕೆಲವು ಹಿರಿಯರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಶಾ ಮತ್ತು ಯಡಿಯೂರಪ್ಪ ಮಧ್ಯೆ ನಡೆದ ಮಾತುಕತೆ ವೇಳೆ ಚರ್ಚಿಸಲಾಗಿದೆ. 2008 ರಿಂದ 2013 ರ ವರೆಗೆ ಸಚಿವರಾಗಿದ್ದ ಅನೇಕರಿಗೆ ಈ ಬಾರಿ ಅವಕಾಶ ದೊರೆಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಸಂಭಾವ್ಯರ ಪಟ್ಟಿ
*ಜಗದೀಶ ಶೆಟ್ಟರ್
*ಕೆ.ಎಸ್. ಈಶ್ವರಪ್ಪ
*ಗೋವಿಂದ ಕಾರಜೋಳ
*ಬಸವರಾಜ ಬೊಮ್ಮಾಯಿ
*ಆರ್. ಅಶೋಕ್
*ಬಿ. ಶ್ರೀರಾಮುಲು
*ಜೆ.ಸಿ. ಮಾಧುಸ್ವಾಮಿ
*ಉಮೇಶ ಕತ್ತಿ
* ಪ್ರಭು ಚೌಹಾಣ್
*ಎಸ್.ಎ. ರಾಮದಾಸ್
*ಎಸ್. ಅಂಗಾರ
*ಶಶಿಕಲಾ ಜೊಲ್ಲೆ
*ಹಾಲಾಡಿ ಶ್ರೀನಿವಾಸ ಶೆಟ್ಟಿ
* ಎಚ್.ನಾಗೇಶ್(ಪಕ್ಷೇತರ)
* ಕೋಟ ಶ್ರೀನಿವಾಸ ಪೂಜಾರಿ/ಎನ್. ರವಿಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.