ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ತನಿಖಾಸ್ತ್ರ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ.
2020ರ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಪೂರ್ವಾನುಮತಿ ನೀಡಬೇಕು ಎಂದು ರಾಜ್ಯಪಾಲರನ್ನು ಕೋರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಕ್ರಮ ಜರುಗಿಸುವಂತೆ 2020ರ ನವೆಂಬರ್ 10ರಂದು ರಾಜ್ಯಪಾಲರಿಗೆ ದೂರು ನೀಡಿದ್ದರು. 2021ರಲ್ಲಿ ರಾಜ್ಯಪಾಲರು ದೂರನ್ನು ತಿರಸ್ಕರಿಸಿದ್ದರು. ಆ ದೂರಿನಲ್ಲಿ 16 ಆರೋಪಗಳಿದ್ದು, ಅವು ಅತ್ಯಂತ ಗಂಭೀರ ದೂರುಗಳಾಗಿವೆ. ಈ ವಿಷಯದ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. 2021 ಏಪ್ರಿಲ್ 23ರ ತೀರ್ಮಾನವನ್ನು ವಾಪಸ್ ಪಡೆದು, ದೂರನ್ನು ಪುನರ್ ಪರಿಶೀಲಿಸಿ ತನಿಖೆಗೆ ಪೂರ್ವಾನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.
ಪ್ರಕರಣವೇನು?:
ಬೆಂಗಳೂರಿನ ಬಿದರಳ್ಳಿ ಹೋಬಳಿಯ ಕೊಡಸಪುರ ಸರ್ವೆ ನಂಬರ್ 22 ಮತ್ತು 23ರಲ್ಲಿ 1 ಬಿಎಚ್ಕೆ ಮತ್ತು 3 ಬಿಎಚ್ಕೆ ಫ್ಲಾಟ್ಗಳನ್ನು ನಿರ್ಮಿಸಲು ಟರ್ನ್ಕೀ ಆಧಾರದಲ್ಲಿ 2017ರಲ್ಲಿ ಟೆಂಡರ್ ಕರೆಯಲಾಗಿತ್ತು. ಮೊದಲ ಹಂತದ ನಿರ್ಮಾಣಕ್ಕೆ ₹567 ಕೋಟಿ ಅಂದಾಜು ವೆಚ್ಚ ನಿಗದಿ ಮಾಡಲಾಗಿತ್ತು. ರಾಮಲಿಂಗಂ ಕನ್ಸ್ಸ್ಟ್ರಕ್ಷನ್ ಕಂಪನಿ ಪ್ರೈ ಲಿ ಮತ್ತು ನಾಗಾರ್ಜುನ ಕನ್ಸ್ಸ್ಟ್ರಕ್ಷನ್ ಕಂಪನಿ ಪ್ರೈ ಲಿ ಬಿಡ್ ಸಲ್ಲಿಸಿದ್ದವು. ರಾಮಲಿಂಗಂ ಸಂಸ್ಥೆ ₹666.22 ಕೋಟಿ ನಮೂದಿಸಿತ್ತು. ಈ ಮೊತ್ತ ಅಂದಾಜು ವೆಚ್ಚಕ್ಕಿಂತ ₹99.22 ಕೋಟಿ ಹೆಚ್ಚಾಗಿತ್ತು. ನಾಗಾರ್ಜುನ ₹691.74 ಕೋಟಿ ನಮೂದು ಮಾಡಿತ್ತು. ಇದು ಅಂದಾಜು ವೆಚ್ಚಕ್ಕಿಂತ ₹124.74 ಕೋಟಿ ಹೆಚ್ಚಾಗಿತ್ತು ಎಂದು ಪಾಟೀಲ ವಿವರಿಸಿದರು.
2019ರಲ್ಲಿ ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ಅವರು, ಅಂದಿನ ಬಿಡಿಎ ಆಯುಕ್ತ ಜಿ.ಸಿ.ಪ್ರಕಾಶ್ ಅವರ ಮೂಲಕ ರಾಮಲಿಂಗಂ ಸಂಸ್ಥೆಯಿಂದ ₹12 ಕೋಟಿ ಲಂಚ ಕೇಳಿದ್ದರು. ಪ್ರಕಾಶ್ ಅವರ ಪರವಾಗಿ ಕೆ.ರವಿ ಎಂಬುವರು ಲಂಚದ ಹಣ ಪಡೆದಿದ್ದರು. ಲಂಚದ ಹಣ ಕೈ ಬದಲಾವಣೆಯ ಸಂಭಾಷಣೆಯ ಆಡಿಯೊ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು. ಆ ಸುದ್ದಿವಾಹಿನಿಯ ಮೇಲೆ ಪೊಲೀಸ್ರು ದಾಳಿ ನಡೆಸಿದ್ದರು. ಪ್ರಕರಣದ ಎರಡನೇ ಆರೋಪಿ ಬಿ.ವೈ.ವಿಜಯೇಂದ್ರ ಅವರು ತಮಗೆ ಆಯುಕ್ತರಿಂದ ₹12 ಕೋಟಿ ತಲುಪಿಲ್ಲ ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿತ್ತು ಎಂದು ಅಬ್ರಹಾಂ ದೂರಿನಲ್ಲಿ ಹೇಳಿದ್ದರು.
ಈ ಸಂಬಂಧ ಅಬ್ರಹಾಂ ಅವರು ಮೊದಲಿಗೆ ಎಸಿಬಿಗೆ ದೂರು ಸಲ್ಲಿಸಿದ್ದರು. ಆದರೆ, ಎಸಿಬಿ ಎಫ್ಐಆರ್ ದಾಖಲಿಸಿರಲಿಲ್ಲ. ಅದೇ ಸಂದರ್ಭದಲ್ಲಿ ಅವರು ರಾಜ್ಯಪಾಲರಿಗೂ ದೂರು ಸಲ್ಲಿಸಿ, ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ನೀಡುವಂತೆ ದೂರು ನೀಡಿದ್ದರು. ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದರು.
ಈಗ ಯಡಿಯೂರಪ್ಪ ಶಾಸಕ ಅಲ್ಲದಿದ್ದರೂ, ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಈ ನಿರ್ಣಯಗಳನ್ನು ಕೈಗೊಂಡಿದ್ದರಿಂದ ರಾಜ್ಯಪಾಲರ ಅನುಮತಿ ಅಗತ್ಯವಿದೆ ಎಂದು ಎಚ್.ಕೆ.ಪಾಟೀಲ ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.