ADVERTISEMENT

ವನ್ಯಜೀವಿ ರಕ್ಷಣೆಗೆ ಲಿಡಾರ್ ತಂತ್ರಜ್ಞಾನ ಬಳಕೆ: ಸಚಿವ ಪ್ರಕಾಶ್‌ ಜಾವಡೇಕರ್‌

‘ಕಾವೇರಿ ಕೂಗು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 12:11 IST
Last Updated 21 ಮಾರ್ಚ್ 2021, 12:11 IST
ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ರೈತಮಹಿಳೆ ಮಂಗಳಾ ಅವರಿಗೆ ಸಸಿ ನೀಡಿದರು. ಪ್ರಕಾಶ್‌ ಜಾವಡೇಕರ್‌, ಜಗ್ಗಿ ವಾಸುದೇವ್ ಇದ್ದಾರೆ
ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ರೈತಮಹಿಳೆ ಮಂಗಳಾ ಅವರಿಗೆ ಸಸಿ ನೀಡಿದರು. ಪ್ರಕಾಶ್‌ ಜಾವಡೇಕರ್‌, ಜಗ್ಗಿ ವಾಸುದೇವ್ ಇದ್ದಾರೆ   

ಬೆಂಗಳೂರು: ‘ವನ್ಯಜೀವಿ–ಮಾನವ ಸಂಘರ್ಷ ಹೆಚ್ಚುತ್ತಿದೆ. ಆಹಾರ–ನೀರು ಅರಸಿ ಪ್ರಾಣಿಗಳು ನಗರ ಪ್ರವೇಶಿಸುತ್ತಿವೆ. ಲಿಡಾರ್‌ ತಂತ್ರಜ್ಞಾನವನ್ನು ಬಳಸಿ ಅವುಗಳು ಇರುವಲ್ಲಿಯೇ ಆಹಾರ–ನೀರು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಜಾರಿಗೆ ತರುತ್ತಿದೆ’ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

ನಗರದಲ್ಲಿ ಭಾನುವಾರ ಈಶ ಫೌಂಡೇಷನ್‌ನ ‘ಕಾವೇರಿ ಕೂಗು’ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಾನವ–ಆನೆ ಸಂಘರ್ಷದಲ್ಲಿ ಪ್ರತಿ ವರ್ಷ 500 ಜನ ಸಾವಿಗೀಡಾಗುತ್ತಿದ್ದರೆ, 100 ಆನೆಗಳೂ ಮರಣ ಹೊಂದುತ್ತಿವೆ’ ಎಂದರು.

‘ಲಿಡಾರ್ (ಲೈಟ್‌ ಡಿಟೆಕ್ಷನ್‌ ಅಂಡ್‌ ರೇಂಜಿಂಗ್ ) ತಂತ್ರಜ್ಞಾನವು ಅರಣ್ಯಪ್ರದೇಶದ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ನೀರಿನ ಲಭ್ಯತೆ ಎಲ್ಲಿದೆ ಅಥವಾ ನೀರಿನ ಒದಗಿಸಲು ಇರುವ ಸೂಕ್ತ ಸ್ಥಳ ಯಾವುದು, ಪ್ರಾಣಿಗಳಿಗೆ ಹುಲ್ಲು ಅಥವಾ ಆಹಾರ ಯಾವ ಸ್ಥಳದಲ್ಲಿ ಸಿಗುತ್ತದೆ ಎಂಬುದನ್ನು ನಿಖರವಾಗಿ ತಿಳಿದು, ಒದಗಿಸುವ ಕೆಲಸ ಮಾಡಲಾಗುತ್ತದೆ’ ಎಂದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಅರಣ್ಯ ಸಂರಕ್ಷಣೆಯ ಉದ್ದೇಶಕ್ಕೆ ಈ ಬಾರಿಯ ಬಜೆಟ್‌ನಲ್ಲಿ ₹2,945 ಕೋಟಿ ತೆಗೆದಿರಿಸಲಾಗಿದೆ. 2019ರಲ್ಲಿ ರಾಜ್ಯದಲ್ಲಿ 1,025 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಅಬಿವೃದ್ಧಿ ಪಡಿಸುವ ಮೂಲಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದೇವೆ’ ಎಂದರು.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ನೆಟ್ಟು ಮೂರು ವರ್ಷ ಪೋಷಿಸುವ ರೈತರಿಗೆ ಪ್ರತಿ ಸಸಿಗೆ ₹125 ಪ್ರೋತ್ಸಾಹ ಧನವನ್ನು ಅರಣ್ಯ ಇಲಾಖೆ ಮೂಲಕ ನೀಡಲಾಗುತ್ತಿದೆ’ ಎಂದು ಹೇಳಿದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಅಭಿವೃದ್ಧಿಯ ಹೆಸರಲ್ಲಿ ನಾವು ಕಾಂಕ್ರೀಟ್ ಕಾಡುಗಳನ್ನು ಸೃಷ್ಟಿಸುತ್ತಿದ್ದೇವೆ. ನಾವು ಉಳಿಯಬೇಕೆಂದರೆ ಜಲಮೂಲಗಳನ್ನು, ಪರಿಸರವನ್ನು ಸಂರಕ್ಷಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ಕಾವೇರಿ ಕೂಗು ಅಭಿಯಾನ ಅತಿ ಮಹತ್ವದ್ದಾಗಿದೆ’ ಎಂದು ಶ್ಲಾಘಿಸಿದರು.

ಈಶ ಫೌಂಡೇಷನ್‌ ಸ್ಥಾಪಕ ಜಗ್ಗಿ ವಾಸುದೇವ್, ‘2019ರ ಸೆಪ್ಟೆಂಬರ್‌ನಲ್ಲಿ ಕಾವೇರಿ ಕೂಗು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅವಧಿಯಲ್ಲಿ ಕಾವೇರಿ ಕೊಳ್ಳದ 189 ತಾಲ್ಲೂಕುಗಳಲ್ಲಿ 1.1 ಕೋಟಿ ಸಸಿಗಳನ್ನು ನೆಡಲಾಗಿದೆ. 33 ಸಾವಿರ ರೈತರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘12 ವರ್ಷಗಳ ಈ ಅಭಿಯಾನದಲ್ಲಿ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅರಣ್ಯಕೃಷಿಯ ಮೂಲಕ ರೈತರ ಆದಾಯವನ್ನು 8 ಪಟ್ಟು ಹೆಚ್ಚಿಸುವ ಉದ್ದೇಶವಿದೆ. 166 ದೇಶಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ, ಸಂಗ್ರಹವಾದ ಒಟ್ಟು ಮೊತ್ತವೆಷ್ಟು ಎಂಬುದರ ಬಗ್ಗೆ ಇನ್ನೂ ಲೆಕ್ಕಪರಿಶೋಧನೆ ನಡೆಯುತ್ತಿದೆ’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.