ನಾಪೋಕ್ಲು: ಕಾವೇರಿ ತೀರ್ಥೋದ್ಭವಕ್ಕೆ ಸಜ್ಜಾಗುತ್ತಿರುವ ಭಾಗಮಂಡಲದಲ್ಲಿ ಭಾನುವಾರ ತುಲಾಸಂಕ್ರಮಣದ ಪ್ರಯುಕ್ತ ಕಟ್ಟು ವಿಧಿಸುವ ಕಾರ್ಯ ಜರುಗಿತು.
ತಕ್ಕಮುಖ್ಯಸ್ಥರು, ಅರ್ಚಕರು, ಹಾಗೂ ತಲಕಾವೇರಿ ಭಂಗಂಡೇಶ್ವರ ದೇವಾಲಯದ ಸಮಿತಿ ಸದಸ್ಯರು ಸಾಂಪ್ರದಾಯಿಕ ಕಾರ್ಯಕ್ರಮ ನೆರವೇರಿಸಿದರು.
ಭಕ್ತರು ಸ್ಥಳೀಯ ತೋಟಕ್ಕೆ ತೆರಳಿ ಬಾಳೆಗೊನೆ ಕಡಿದು ನಾದ ಸ್ವರದೊಂದಿಗೆ ಮೆರವಣಿಗೆ ಮೂಲಕ ಭಗಂಡೇಶ್ವರ ದೇವಾಲಯದ ಸನ್ನಿಧಿಗೆ ಬಂದರು.
ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ ವಿಧಿಸಲಾಯಿತು. ಈ ದಿನದಿಂದ ಜಾತ್ರೆ ಮುಗಿಯುವವರೆಗೆ ಭಾಗಮಂಡಲ ವ್ಯಾಪ್ತಿಯ ಭಾಗಮಂಡಲ, ತಾವೂರು,ತಣ್ಣಿಮಾನಿ,ಕೋರಂಗಾಲ ಮತ್ತು ಚೇರಂಗಾಲದ ಗ್ರಾಮಸ್ಥರು ಮದ್ಯಪಾನ, ಮಾಂಸ ಸೇವನೆ ಮಾಡುವಂತಿಲ್ಲ. ಮರ ಕಡಿಯುವುದು, ಬಲಿ, ಹಿಂಸಾಕೃತ್ಯಗಳನ್ನು ನಡೆಸುವುದು ಮುಂತಾದ ಕಾರ್ಯಗಳಿಗೆ ನಿರ್ಬಂಧ ಹೇರಲಾಯಿತು.
ಬೆಳಿಗ್ಗೆ 10.33 ಕ್ಕೆ ವೃಶ್ಚಿಕಾ ಲಗ್ನದಲ್ಲಿ ಆಜ್ಞಾಮುಹೂರ್ತ ನೆರವೇರಿಸಲಾಯಿತು. ಅ.14 ರಂದು ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಕಾರ್ಯ ನೆರವೇರಲಿದೆ. ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯ ಮೀನಾಕ್ಷಿ, ಪ್ರಮುಖರಾದ ಹೊಸೂರು ಸತೀಶ್ ಕುಮಾರ್, ದೇವಂಗುಡಿ ಹರ್ಷ, ಭಾಸ್ಕರ, ಪಾರುಪತ್ತೆಗಾರ ಪೊನ್ನಣ್ಣ, ಹಾಗೂ ಸ್ಥಳೀಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.