ಬೆಂಗಳೂರು: ಹತ್ತನೇ ತರಗತಿ ಮೆಟ್ಟಿಲು ಹತ್ತಿದರೂ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಇಂಗ್ಲಿಷ್ನಲ್ಲಿ ವಿರುದ್ಧ ಪದ ಬರೆಯಲು ಗೊತ್ತಿಲ್ಲ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಆಹಾರದ ಮೂಲ ಗುರುತಿಸಲಾಗುವುದಿಲ್ಲ. ಅಚ್ಚರಿಯ ಸಂಗತಿ ಎಂದರೆ, ನಾಲ್ಕನೇ ತರಗತಿ ಮಕ್ಕಳಿಗೆ ಕಾಡುಪ್ರಾಣಿಗಳೂ ಗೊತ್ತಿಲ್ಲ.
ಇಂತಹ ಶೈಕ್ಷಣಿಕ ದುಃಸ್ಥಿತಿ ಇರುವುದು ಬೇರೆಲ್ಲೂ ಅಲ್ಲ, ಕರ್ನಾಟಕದಲ್ಲಿ. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್ಕ್ಯೂಎಎಸಿ) ನಡೆಸಿರುವ ‘ಗಣತಿ ಆಧಾರಿತ ರಾಜ್ಯ ಸಾಧನಾ ಸಮೀಕ್ಷೆ–2018’ರ ವರದಿಯಲ್ಲಿರುವ ಅಂಶಗಳಿವು.
ಸರಾಸರಿ ಶೇ 60ರಷ್ಟು ವಿದ್ಯಾರ್ಥಿ ಗಳು ತಪ್ಪು ಉತ್ತರ ನೀಡಿದ ಪ್ರಶ್ನೆ ಕ್ರೋಡೀಕರಿಸಿ ಪರಿಷತ್ತು ಮಕ್ಕಳ ಪಠ್ಯ ಕಲಿಕೆಯಲ್ಲಿರುವ ಕೊರತೆ ಕಂಡು ಹಿಡಿಯುವ ಪ್ರಯತ್ನ ಮಾಡಿದೆ. ಇದನ್ನು ಸರಿಪಡಿಸಲು ಪೂರಕ ಬೋಧನೆಯ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿದೆ.
ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 4ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕಳೆದ ಅಕ್ಟೋಬರ್ 29 ಮತ್ತು 30ರಂದು ಸಮೀಕ್ಷೆಯ ಸಂಕಲನಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ಪರಿಸರ ವಿಜ್ಞಾನ ಅಥವಾ ವಿಜ್ಞಾನ ಹಾಗೂ ಸಮಾಜ ವಿಷಯಗಳ ತಲಾ 30 ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
**
ಈ ವರದಿಯಲ್ಲಿನ ಜಿಲ್ಲಾವಾರು ಫಲಿತಾಂಶದ ಅನ್ವಯ ಶಾಲಾ ಶೈಕ್ಷಣಿಕ ಯೋಜನೆ ರೂಪಿಸಿಕೊಂಡು ಕಲಿಕಾ ಗುಣಮಟ್ಟ ಹೆಚ್ಚಿಸುತ್ತೇವೆ
- ವಿ.ಸುಮಂಗಲಾ, ನಿರ್ದೇಶಕಿ, ಕೆಎಸ್ಕ್ಯೂಎಎಸಿ
***
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.