ADVERTISEMENT

ಮುಖ್ಯಮಂತ್ರಿ ಬದಲಾವಣೆ: ಖರ್ಗೆ ಎಚ್ಚರಿಕೆ ನಂತರವೂ ನಿಲ್ಲದ ಚರ್ಚೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 23:55 IST
Last Updated 4 ಫೆಬ್ರುವರಿ 2025, 23:55 IST
   

ಬೆಂಗಳೂರು: ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ‘ಬಾಯಿ ಮುಚ್ಚಿಕೊಂಡು’ ಇರುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ನೀಡಿದ ನಂತರವೂ ಕೆಲವು ಸಚಿವರು, ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಮುಂದುವರಿಸಿದ್ದಾರೆ. 

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಕಾಂಗ್ರೆಸ್‌ ಶಾಸಕ ಆರ್‌.ವಿ. ದೇಶಪಾಂಡೆ, ‘ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ. ಪಕ್ಷದ ಶಾಸಕಾಂಗ ಸಭೆಯ ಮುಂದೆಯೂ ಇಲ್ಲ. ಈ ವಿಷಯ ಚರ್ಚೆಯೂ ಆಗುತ್ತಿಲ್ಲ’ ಎಂದರು.

‘ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗಬೇಕು ಎಂದು ಅಭಿಮಾನಿಗಳು ಹೇಳಿದರೆ, ಡಿ.ಕೆ. ಶಿವಕುಮಾರ್, ಹೈಕಮಾಂಡ್ ಅಥವಾ ನಾವಾದರೂ  ಏನು ಮಾಡಲು ಆಗುತ್ತದೆ. ಹೈಕಮಾಂಡ್ ಸೂಚನೆಯ ನಂತರವೂ ಈ ರೀತಿ ಮಾತನಾಡಿದರೆ ಹೈಕಮಾಂಡ್‌ ನಾಯಕರೇ ಕ್ರಮ ತೆಗೆದುಕೊಳ್ಳಬೇಕು’ ಎಂದ ಅವರು, ‘ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದರು.

ADVERTISEMENT

‘ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿ ಇರುತ್ತಾರೆಯೇ’ ಎಂಬ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವಾಗ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಎಂದು ಆಯ್ಕೆ ಮಾಡಿಲ್ಲ’ ಎಂದರು. 

ಅಶಿಸ್ತು ಅಂದರೆ ಅಶಿಸ್ತು: ‘ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು’ ಎಂದು ಕೆಲವು ಶಾಸಕರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ‘ಶಾಸಕರ ಅಭಿಪ್ರಾಯಕ್ಕೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ, ಅವರ ಮಾತನ್ನು ಎಲ್ಲರೂ ಪಾಲಿಸಬೇಕು. ನಂತರವೂ ಮಾತನಾಡುತ್ತಿದ್ದಾರೆಂದರೆ ನಾಯಕರೇ ತೀರ್ಮಾನ ತೆಗೆದುಕೊಳ್ಳಬೇಕು’ ಎಂದರು. 

‘ಪಕ್ಷದ ಶಿಸ್ತು ಎಂದಾಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಹರಿಪ್ರಸಾದ್‌ ಎಂದು ಬರುವುದಿಲ್ಲ. ಅಶಿಸ್ತು ಅಂದರೆ ಅಶಿಸ್ತು. ಯಾರೇ ಅಶಿಸ್ತು ತೋರಿಸಿದರೂ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಆ ಸಮಿತಿಯವರು ಯಾವುದು ಶಿಸ್ತು, ಯಾವುದು ಅಶಿಸ್ತು ಎಂದು ತೀರ್ಮಾನ ಮಾಡಬೇಕು’ ಎಂದರು.

ನಾನೇನೂ ಮಾತನಾಡಲ್ಲ:

‘ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ. ಐದು ವರ್ಷ ಸರ್ಕಾರ ಇರಲಿದೆ. ಮುಂದೆ 2028ರಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದ ಶಾಸಕ ಲಕ್ಷ್ಮಣ ಸವದಿ,  ‘ಎಲ್ಲರೂ ಬಾಯಿ ಮುಚ್ಚಿಕೊಂಡು ಇರುವಂತೆ ನಮ್ಮ ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ಹೀಗಾಗಿ, ನಾನೇನೂ ಮಾತನಾಡುವುದಿಲ್ಲ’ ಎಂದರು.

‘ಡಿಕೆಶಿ ಸಿ.ಎಂ ಆಗಲಿ ಎಂದು ಬಯಸುವುದರಲ್ಲಿ ತಪ್ಪಿಲ್ಲ’

ಹುಕ್ಕೇರಿ (ಬೆಳಗಾವಿ ಜಿಲ್ಲೆ): ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಅವರ ಅಭಿಮಾನಿಗಳು ಬಯಸುವುದರಲ್ಲಿ ತಪ್ಪಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡದಂತೆ ಹೈಕಮಾಂಡ್ ಫರ್ಮಾನು ಹೊರಡಿಸಿದೆಯಲ್ಲವೇ’ ಎಂಬ ಪ್ರಶ್ನೆಗೆ ‘ಪಕ್ಷಕ್ಕೆ ಹಾನಿ ಆಗಬಾರದೆಂದು ಹೈಕಮಾಂಡ್‌ ಹೇಳಿದೆ’ ಎಂದರು.

ದಲಿತ ಶಾಸಕರು ನವದೆಹಲಿಗೆ ಹೋಗುತ್ತಿರುವ ಕುರಿತ ಪ್ರಶ್ನೆಗೆ ‘ನಾನು ನವದೆಹಲಿಗೆ ಹೋಗುತ್ತೇನೆ ಎಂದು ಯಾರು ಹೇಳಿದರು? ಹೋಗುವುದಾದರೆ ಮಾಧ್ಯಮ ಮಿತ್ರರಿಗೆ ತಿಳಿಸಿಯೇ ಹೋಗುವೆ’ ಎಂದರು.

‘ಡಿ.ಕೆ.ಶಿವಕುಮಾರ್‌ ಪ್ರಯಾಗರಾಜ್‌ಗೆ ತೆರಳುತ್ತಿದ್ದು ನೀವೂ ಕುಂಭಮೇಳಕ್ಕೆ ಹೋಗುವಿರಾ’ ಎಂಬ ಪ್ರಶ್ನೆಗೆ ‘ಇಲ್ಲಿಯೇ ಹಿರಣ್ಯಕೇಶಿ ಘಟಪ್ರಭಾ ಇವೆ. ಇಲ್ಲೇ ಪುಣ್ಯಸ್ನಾನ ಮಾಡುತ್ತೇನೆ’ ಎಂದರು.

‘ಆಸೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ’

ರಾಮನಗರ: ‘ಅವರವರ ನಾಯಕರು ಮುಖ್ಯಮಂತ್ರಿ ಆಗಬೇಕೆಂಬುದು ಕಾರ್ಯಕರ್ತರ ಆಸೆ. ಅದೇ ರೀತಿ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ‌ಮುಖ್ಯಮಂತ್ರಿ ಆಗಬೇಕು ಅಂತ ಹೇಳುವುದರಲ್ಲಿ ತಪ್ಪೇನಿದೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಪ್ರಶ್ನಿಸಿದರು.

‘ಸಚಿವರಾದ ಜಿ. ಪರಮೇಶ್ವರ ಎಂ.ಬಿ. ಪಾಟೀಲ ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳಿಗೂ ತಮ್ಮ ನಾಯಕರು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಗಳಿಗೂ ಇದೆ. ಇಷ್ಟಕ್ಕೂ ನಾವು ಯಾರ ಬೆಂಬಲಿಗರೂ ಅಲ್ಲ. ಬದಲಿಗೆ ಪಕ್ಷದ ಹೈಕಮಾಂಡ್ ಬೆಂಬಲಿಗರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.