ADVERTISEMENT

ಗೌರಿಬಿದನೂರು: ಕೊರೊನಾ ಮೂರನೇ ಪ್ರಕರಣ ದೃಢ, ಸ್ಥಳೀಯರಲ್ಲಿ ಆತಂಕ

ಮೆಕ್ಕಾ ಯಾತ್ರೆ ಕೈಗೊಂಡ ಮೂರು ಜನರಲ್ಲೂ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:28 IST
Last Updated 24 ಮಾರ್ಚ್ 2020, 10:28 IST
   

ಗೌರಿಬಿದನೂರು (ಚಿಕ್ಕಬಳ್ಳಾಪುರ):ಮೆಕ್ಕಾ ಯಾತ್ರೆಯಿಂದ ಹಿಂದಿರುಗಿದ್ದ ಗೌರಿಬಿದನೂರು ತಾಲ್ಲೂಕಿನ ಮೂರು ಜನರ ಪೈಕಿ 56 ವರ್ಷದ ಮತ್ತೊಬ್ಬ ಮಹಿಳೆಯಲ್ಲೂ ಕೋವಿಡ್‌ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಗೌರಿಬಿದನೂರು ನಗರದ ಚೌಡೇಶ್ವರಿ ಬಡಾವಣೆಯ 31ರ ಪ್ರಾಯದ ವ್ಯಕ್ತಿಯೊಬ್ಬರು ಕಳೆದ ಫೆಬ್ರುವರಿಯಲ್ಲಿ ತಮ್ಮ ತಾಯಿ ಮತ್ತು ತೊಂಡೆಬಾವಿಯಲ್ಲಿರುವ ಚಿಕ್ಕಮ್ಮನ ಜತೆ ಮೆಕ್ಕಾ ಯಾತ್ರೆ ಕೈಗೊಂಡು, ಮಾರ್ಚ್ 14 ರಂದು ಯಾತ್ರೆಯಿಂದ ವಾಪಾಸಾಗಿದ್ದರು. ಈ ಪೈಕಿ ಆರೋಗ್ಯ ಹದಗೆಟ್ಟ ಕಾರಣಕ್ಕೆ ತಾಯಿ–ಮಗ ಬೆಂಗಳೂರಿಗೆ ತೆರಳಿ ತಪಾಸಣೆ ಮಾಡಿಸಿಕೊಂಡ ವೇಳೆ ಮಗನಲ್ಲಿ ಕೋವಿಡ್‌ ಸೋಂಕಿರುವುದು ಮಾ.21 ರಂದು ದೃಢಪಟ್ಟಿತ್ತು.

ಬಳಿಕ ಸೋಮವಾರ (ಮಾ.22 ತಾಯಿಯಲ್ಲೂ ಸೋಂಕು ಇರುವುದು ಪತ್ತೆಯಾಗಿತ್ತು. ಈ ನಡುವೆ ಸೋಂಕಿತ ವ್ಯಕ್ತಿಯ ಚಿಕ್ಕಮ್ಮನನ್ನು ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ತಪಾಸಣೆಗೆ ದಾಖಲಿಸಿ, ನಿಗಾ ವ್ಯವಸ್ಥೆಯಲ್ಲಿಡಲಾಗಿತ್ತು. ಅವರಲ್ಲೂ ಸೋಂಕು ಇರುವುದು ಮಂಗಳವಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ಯೋಗೇಶ್‌ ಗೌಡ ಖಚಿತಪಡಿಸಿದರು.

ADVERTISEMENT

ಸದ್ಯ, ಮಗ ಮತ್ತು ತಾಯಿಗೆ ಬೆಂಗಳೂರಿನಲ್ಲಿ, ಚಿಕ್ಕಮ್ಮನಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೂರನೇ ಪ್ರಕರಣ ವರದಿಯಾದ ಬೆನ್ನಲ್ಲೇ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಮಂಗಳವಾರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.