ADVERTISEMENT

ಐಎಂಎ ಬಹುಕೋಟಿ ವಂಚನೆ: ಮಕ್ಕಳ ಮದುವೆ ಹಣ ಹೋಯಿತು

ಯಲ್ಲಿ ಹಣ ಕಳೆದುಕೊಂಡ ಸಬೀನಾ ನೋವಿನ ನುಡಿ

ಡಿ.ಕೆ.ಬಸವರಾಜು
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

ದಾವಣಗೆರೆ: ‘ಕೂಲಿ ಕೆಲಸ, ಸಾಲ ಮಾಡಿ, ಒಡವೆ ಮಾರಿ ಹಣ ಇಟ್ಟುಕೊಂಡಿದ್ದೆ. ಈಗ ಏನು ಇಲ್ಲದೇ ದಿಗಿಲು ತೋಚದಂತಾಗಿದೆ..

ಐಎಂಎ ಸಮೂಹ ಪ್ರಕರಣದಲ್ಲಿ ವಂಚನೆ ಪ್ರಕರಣದಲ್ಲಿ ₹4 ಲಕ್ಷ ಕಳೆದುಕೊಂಡಿರುವ ಎಸ್‌ಜೆಎಂ ನಗರದ ಸಬೀನಾ ಅವರು ನೋವಿನಿಂದ ಹೇಳಿಕೊಂಡಿದ್ದು ಹೀಗೆ.

ಸಬೀನಾ ಅವರಿಗೆ ಪತಿ ಇಲ್ಲ. ಒಬ್ಬರೇ ದುಡಿದು ಮಕ್ಕಳನ್ನು ಸಾಕಬೇಕಾಗಿದೆ. ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬರು ಪ್ರಥಮ, ಇನ್ನೊಬ್ಬರು ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಕಿಡ್ನಿ ಸೋಂಕಿನಿಂದ ಬಳಲುತ್ತಿರುವ ಇವರು ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಾಯಿಗೆ ಬಿಪಿ ಇದೆ. ಇರುವ ಒಂದು ಸಣ್ಣ ಮನೆಯಲ್ಲಿ ಒಂದು ಭಾಗವನ್ನು ಬಾಡಿಗೆಗೆ ನೀಡಿ ಮತ್ತೊಂದರಲ್ಲಿ ಅವರು ವಾಸವಿದ್ದಾರೆ. ತಿಂಗಳಿಗೆ ₹1200 ಬಾಡಿಗೆಯಿಂದ ಜೀವನ ಸಾಗಿಸುತ್ತಿದ್ದಾರೆ.

ADVERTISEMENT

‘ಮಕ್ಕಳ ಶಿಕ್ಷಣ ಕೊಡಿಸಲು, ಮದುವೆ ಮಾಡಿಸಲು, ಮಕ್ಕಳ ಭವಿಷ್ಯಕ್ಕಾಗಿ ಹಣ ಇಟ್ಟುಕೊಂಡಿದ್ದೆ. ಅಮ್ಮನಿಗೆ ಇದ್ದಾರೆ. ಪ್ರತಿ ತಿಂಗಳು ಬರುವ ಬಾಡಿಗೆ ಹಣದಲ್ಲಿ ಮನೆ ನಿರ್ವಹಣೆ ಮಾಡುತ್ತಿದ್ದೇನೆ. ಮಕ್ಕಳಿಗೆ ವರ್ಷಕ್ಕೆ ಒಬ್ಬರಿಗೆ ₹25 ಸಾವಿರ ಕಾಲೇಜು ಶುಲ್ಕ ಕಟ್ಟಬೇಕು. ಪುಸ್ತಕಗಳು ದುಬಾರಿಯಾಗಿವೆ. ಹಣವಿಲ್ಲದೇ ತುಂಬಾ ಸಮಸ್ಯೆಯಾಗಿದೆ’ ಎಂದು ಅಳಲು ತೋಡಿಕೊಂಡರು.

ಅಮ್ಮನಿಗೆ ಬಿಪಿ ಇದೆ. ನನಗೆ ಕಿಡ್ನಿ ಇನ್‌ಫೆಕ್ಷನ್ ಆಗಿತ್ತು. ಚಿಕಿತ್ಸೆಗಾಗಿ ತುಂಬಾ ಹಣ ಖರ್ಚಾಗಿತ್ತು. ಸಾಲ ಮಾಡಿ ತೀರಿಸಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಎಲ್ಲರೂ ಐಎಂಎನಲ್ಲಿ ಬಂಡಾವಳ ಹೂಡುತ್ತಿದ್ದರು. ನಾನೂ ಹಣ ಹೂಡಿಕೆ ಮಾಡಿದೆ. ಈಗ ಸಮಸ್ಯೆ ಆಗಿದೆ.

ಭಗತ್‌ಸಿಂಗ್‌ ನಗರದ ಜಾಕೀರ್ ಎಂಬವರು ₹10 ಲಕ್ಷ ಕಳೆದುಕೊಂಡಿದ್ದಾರೆ. ಅವರ ತಂದೆಯ ನಿವೇಶನವನ್ನು ಮಾರಾಟ ಮಾಡಿ ಹೂಡಿಕೆ ಮಾಡಿದ್ದರು. ಮೆಡಿಕಲ್‌ ರೆಪ್ರೆಸೆಂಟಟೀವ್ ಆಗಿದ್ದ ಇವರು ತಂಗಿಯ ಮದುವೆಗೆ ಎಂದು ಹಣ ಕೂಡಿಟ್ಟಿದ್ದರು. ಈಗ ಅವರಿಗೆ ದಿಕ್ಕೆ ತೋಚದಂತಾಗಿದೆ.

ಅಲ್ಲದೇ ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಆಗಿರುವ ಇಮಾಮ್‌ನಗರದ ನಿಜಾಮುದ್ದೀನ್‌ ₹1ಲಕ್ಷ ಕಳೆದುಕೊಂಡಿದ್ದಾರೆ. ‘ಪತ್ನಿಯ ಬಂಗಾರದ ಬಳೆ ಮಾರಾಟ ಮಾಡಿ ಹಣ ಹೂಡಿಕೆ ಮಾಡಿದ್ದೇ’ ಆರಂಭದಲ್ಲಿ ಲಾಭ ಬಂತು. ಬಹಳ ಜನರು ಹೂಡಿಕೆ ಮಾಡಿದ್ದರು. ನಾನು ಅವರನ್ನು ಹೂಡಿಕೆ ಮಾಡಿದೆ’ ಎನ್ನುತ್ತಾರೆ.

‘ಬೆಂಗಳೂರು ಬಿಟ್ಟರೆ ದಾವಣಗೆರೆಯವರೇ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆ. ಐಎಂಎ ಸಮೂಹ ಪ್ರಕರಣದಲ್ಲಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರವ ನಿರ್ದೇಶಕರಲ್ಲಿ ದಾದಾಪೀರ್ ಹಾಗೂ ನಿಜಾಮುದ್ದೀನ್ ಖಾನ್‌ ಮೂಲತಃ ದಾವಣಗೆರೆಯವರು. ಇದರಿಂದಾಗಿ ಹೆಚ್ಚಿನ ಜನರು ಆಕರ್ಷಣೆಗೊಳಗಾಗಿ ಹೂಡಿಕೆ ಮಾಡಿದ್ದಾರೆ’ ಎಂದು ಹೇಳುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.