ನವದೆಹಲಿ: 2019ನೇ ಸಾಲಿನ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಶಕ್ತಿ’ ಪುರಸ್ಕಾರಕ್ಕೆ ಪಾತ್ರವಾಗಿರುವ ರಾಜ್ಯದ ಆರು ಮಕ್ಕಳು ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ರಾಜ್ಯದ ‘ರಂಗ ಕಹಳೆ’ ಸಂಸ್ಥೆಗೆ ‘ಬಾಲ ಕಲ್ಯಾಣ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಜ್ಯದ ಎ.ಯು.ನಚಿಕೇತ ಕುಮಾರ್, ಮಹಮ್ಮದ್ ಸುಹೇಲ್, ಚೀಣ್ಯ ಸಲೀಂಪಾಶಾ, ಬಿ.ಆರ್.ಪ್ರತ್ಯಕ್ಷಾ, ಅರುಣಿಮಾ ಸೇನ್, ನಿಖಿಲ್ ಜಿತೂರಿ ಹಾಗೂ ಎಂ.ವಿನಾಯಕ ಅವರು ‘ಬಾಲಶಕ್ತಿ’ ಪುರಸ್ಕಾರ ಸ್ವೀಕರಿಸಿದರು.
ಸಮಾಜಸೇವೆ, ವೈಜ್ಞಾನಿಕ ಆವಿಷ್ಕಾರ, ಶೌರ್ಯ, ಕಲೆ ಮತ್ತಿತರ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿರುವ ರಾಷ್ಟ್ರದ ಒಟ್ಟು 26 ಮಕ್ಕಳು, ಇಬ್ಬರು ಹಿರಿಯರು ಹಾಗೂ ಮೂರು ಸಂಸ್ಥೆಗಳಿಗೆ ಪ್ರಸಕ್ತ ಸಾಲಿನ ಪುರಸ್ಕಾರ ದೊರೆತಿದೆ.
ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡುವ ಈ ಪುರಸ್ಕಾರದ ವೈಯಕ್ತಿಕ ವಿಭಾಗವು ಪದಕ, ₹ 1 ಲಕ್ಷ ನಗದು ಹಾಗೂ ಪ್ರಮಾಣಪತ್ರವನ್ನು, ಸಂಸ್ಥೆಗಳಿಗೆ ನೀಡುವ ಪುರಸ್ಕಾರವು ಪದಕ, ಪ್ರಮಾಣಪತ್ರ ಹಾಗೂ ₹ 5 ಲಕ್ಷ ನಗದು ಒಳಗೊಂಡಿದೆ.
ಪುರಸ್ಕತ ಮಕ್ಕಳು ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವ ಗೌರವ ಹೊಂದಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.