ADVERTISEMENT

‘ಟಿಪ್ಪು ನಿಜಕನಸುಗಳು’ ಕೃತಿ: ಮಾರಾಟಕ್ಕೆ ಸಿವಿಲ್ ಕೋರ್ಟ್ ತಡೆ

ಅಡ್ಡಂಡ ಸಿ. ಕಾರ್ಯಪ್ಪ ವಿರಚಿತ ‘ಟಿಪ್ಪು ನಿಜಕನಸುಗಳು’ ಕೃತಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 18:53 IST
Last Updated 23 ನವೆಂಬರ್ 2022, 18:53 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ವಿರಚಿತ, ‘ಟಿಪ್ಪು ನಿಜಕನಸುಗಳು’ ಕೃತಿ ಮಾರಾಟ ಮತ್ತು ಈ ಕೃತಿಯನ್ನು ಆಧರಿಸಿದ ನಾಟಕ ಪ್ರದರ್ಶಿಸದಂತೆ
ಶಾಶ್ವತ ತಡೆ ನೀಡಬೇಕು’ ಎಂದು ಕೋರಲಾದ ಮನವಿಗೆ ಸಂಬಂಧಿಸಿದಂತೆ ಕೃತಿಯ ಮಾರಾಟಕ್ಕೆ ನಗರದ 14ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.

ಈ ಸಂಬಂಧ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಬೆಂಗಳೂರಿನ ನಿವಾಸಿ ಬಿ.ಎಸ್. ರಫೀವುಲ್ಲಾ ದಾಖಲಿಸಿರುವ ಅಸಲು ದಾವೆಯನ್ನು ನ್ಯಾಯಾಧೀಶ ಜೆ.ಆರ್. ಮೆಂಡೋನ್ಕಾ ಅವರು ಪ್ರತಿವಾದಿಗಳ ಗೈರು ಹಾಜರಿಯಲ್ಲಿ ಏಕಪಕ್ಷೀಯ ಮನವಿ ಆಲಿಸಿದ ಬಳಿಕ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ.

ಮುಂದಿನ ವಿಚಾರಣೆಯನ್ನು ಡಿ. 3ಕ್ಕೆ ನಿಗದಿಪಡಿಸಲಾಗಿದ್ದು, ಅಲ್ಲಿಯವರೆಗೂ ಈ ನಾಟಕ ಕೃತಿಯನ್ನು ಎಲ್ಲೂ ಮಾರಾಟಮಾಡಬಾರದು. ಆನ್‌ಲೈನ್‌ ತಾಣಗಳಲ್ಲಿಯೂ ವಿತರಣೆ ಅಥವಾ ಮಾರಾಟ ಮಾಡಬಾರದು ಎಂದು ಆದೇಶಿಸಿರುವ ನ್ಯಾಯಾಧೀಶರು, ಪ್ರತಿವಾದಿಗಳಾದ ಲೇಖಕ ಅಡ್ಡಂಡ ಸಿ.ಕಾರ್ಯಪ್ಪ, ಪ್ರಕಾಶಕ
ರಾದ ಅಯೋಧ್ಯಾ ಪ್ರಕಾಶನ ಹಾಗೂ ಮುದ್ರಣಕಾರರಾದ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದ್ದಾರೆ.

ADVERTISEMENT

ಅಂತೆಯೇ, ‘ದಾವೆದಾರರು ಈ ಆದೇಶದ ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಎಚ್ಚರಿಸಲಾಗಿದ್ದು, ‘ಮುದ್ರಣಕಾರರು ಮುಂದೊದಗಬಹುದಾದ ಯಾವುದೇ ಪರಿಣಾಮಗಳನ್ನು ಎದುರಿಸುವ ಸ್ವಯಂ ಜವಾಬ್ದಾರಿಯ ಮೇಲೆ ಪುಸ್ತಕವನ್ನು ಮುದ್ರಿಸಬಹುದು ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಬಹುದು‘ ಎಂದು ಸ್ವಾತಂತ್ರ್ಯ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.