ADVERTISEMENT

ಬಿಳಿಕಲ್ಲು ಬೆಟ್ಟದ ಜಿಂಕೆ ಹಂತಕ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ

ಐದು ಕೊಂಬು, ನಾಡ ಬಂದೂಕು ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 16:08 IST
Last Updated 4 ಅಕ್ಟೋಬರ್ 2020, 16:08 IST
ಜಿಂಕೆ ಕೊಂಬುಗಳು, ನಾಡ ಬಂದೂಕು ಜೊತೆ ಆರೋಪಿ
ಜಿಂಕೆ ಕೊಂಬುಗಳು, ನಾಡ ಬಂದೂಕು ಜೊತೆ ಆರೋಪಿ   

ಬೆಂಗಳೂರು: ರಾಮನಗರ ಜಿಲ್ಲೆಯ ಬಿಳಿಕಲ್ಲು ಬೆಟ್ಟದಲ್ಲಿ ಮೂರು ಜಿಂಕೆಗಳನ್ನು ಕೊಂದು ಅವುಗಳ ಕೊಂಬು ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದ ಆರೋಪಿ ಮಲ್ಲೇಶ್ (50) ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

‘ಕನಕಪುರ ತಾಲ್ಲೂಕಿನ ಕೋಣಾಳದೊಡ್ಡಿಯ ಮಲ್ಲೇಶ್, ಇದೇ 3ರಂದು ಬನಶಂಕರಿ 3ನೇ ಹಂತದ ಬಸ್ ನಿಲ್ದಾಣ ಬಳಿ ನಿಂತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆತನನ್ನು ಬಂಧಿಸಲಾಯಿತು. ಜಿಂಕೆಯ ಐದು ಕೊಂಬುಗಳು, ಆನೆಯ ದಂತ ಹಾಗೂ ನಾಡ ಬಂದೂಕು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದೂ ಹೇಳಿದರು.

ADVERTISEMENT

ವಾರಕ್ಕೊಮ್ಮೆ ಕಾಡಿನಲ್ಲಿ ಬೇಟೆ; ‘ತಂದೆಯು ಮನೆಯಲ್ಲಿಟ್ಟಿದ್ದ ನಾಡ ಬಂದೂಕನ್ನು ಆರೋಪಿ ಮಲ್ಲೇಶ್ ಬಳಸುತ್ತಿದ್ದ. ವಾರಕ್ಕೊಮ್ಮೆ ಕಾಡಿಗೆ ಹೋಗಿ ಪ‍್ರಾಣಿಗಳನ್ನು ಬೇಟೆಯಾಡುತ್ತಿದ್ದ’ ಎಂದು ಡಿಸಿಪಿ ಹರೀಶ್ ತಿಳಿಸಿದರು.

‘ಜಿಂಕೆ ಕೊಂದು ಚರ್ಮ, ಮಾಂಸ ಹಾಗೂ ಕೊಂಬು ಮಾರಿದರೆ ಹೆಚ್ಚು ಹಣ ಗಳಿಸಬಹುದೆಂದು ಆರೋಪಿ ಯೋಚಿಸಿದ್ದ. ನಂತರವೇ ಬೆಟ್ಟಕ್ಕೆ ಹೋಗಿ 5 ಜಿಂಕೆಗಳನ್ನು ಬೇಟೆಯಾಡಿ ಕೊಂದಿದ್ದ. ಅದರ ಮಾಂಸ, ಚರ್ಮ ಹಾಗೂ ಒಂದು ಕೊಂಬನ್ನು ತಮಿಳುನಾಡಿನ ಜನರಿಗೆ ಮಾರಾಟ ಮಾಡಿದ್ದ. ಐದು ಕೊಂಬುಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಬೇಟೆಗೆ ಹೋದಾಗ ಆತನಿಗೆ ಆನೆ ದಂತವೊಂದು ಸಿಕ್ಕಿತ್ತು’ ಎಂದೂ ಹೇಳಿದರು.

‘ಲಾಕ್‌ಡೌನ್‌ನಿಂದಾಗಿ ಆರೋಪಿಗೆ ಆರ್ಥಿಕ ತೊಂದರೆ ಉಂಟಾಗಿತ್ತು. ಕೊಂಬು ಹಾಗೂ ಆನೆದಂತವನ್ನು ಮಾರಾಟ ಮಾಡಲು ಗ್ರಾಹಕರಿಗಾಗಿ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.