ADVERTISEMENT

ನವೀನ ಗ್ಯಾನಗೌಡರ್‌ ಪಾರ್ಥಿವ ಶರೀರ ತರಲು ಪ್ರಯತ್ನ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 23:30 IST
Last Updated 1 ಮಾರ್ಚ್ 2022, 23:30 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಉಕ್ರೇನ್‌ನಲ್ಲಿ ಶೆಲ್‌ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ ಗ್ಯಾನಗೌಡರ್‌ ಅವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಲು ಎಲ್ಲ ಪ್ರಯತ್ನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವೀನ್‌ ಅವರ ತಂದೆ ಶೇಖಪ್ಪ ಗ್ಯಾನಗೌಡರ್‌ ಅವರಿಗೆ ದೂರವಾಣಿ ಮೂಲಕ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ‘ನನಗೆ ಬೇಕಾದ ಕುಟುಂಬವಿದು. ಈ ಘಟನೆಯಿಂದ ದುಃಖವಾಗಿದೆ’ ಎಂದು ಮುಖ್ಯಮಂತ್ರಿ ಭಾವುಕರಾದರು.

‘ಮೃತ ಯುವಕ ನಾಲ್ಕನೇ ವರ್ಷದ ವೈದ್ಯಕೀಯ ಕೋರ್ಸ್‌ ಓದುತ್ತಿದ್ದರು. ಕಳೆದ ಒಂದು ವಾರದಿಂದ ಬಂಕರ್‌ನಲ್ಲಿ ಇದ್ದರು. ಇವತ್ತು ಹೊರಗೆ ಬಂದಾಗ ಶೆಲ್‌ ದಾಳಿಗೆ ಸಿಲುಕಿ ಮೃತಪಟ್ಟರು. ಈ ಸಂಬಂಧ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮತ್ತು ಪ್ರಧಾನಿಯವರ ಜತೆಗೂ ಮಾತನಾಡಿದ್ದೇನೆ. ಅವರೂ ಕೂಡ ಕುಟುಂಬದ ವಿವರ ಕೇಳಿದ್ದು, ಮಾತನಾಡುವ ಸಾಧ್ಯತೆ ಇದೆ’ ಎಂದು ಹೇಳಿದರು.

ADVERTISEMENT

‘ಮೃತರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಲು ಎಲ್ಲ ಪ್ರಯತ್ನ ನಡೆಸಲಾಗಿದೆ. ಯುದ್ಧಪೀಡಿತ ಪ್ರದೇಶವಾಗಿರುವುದರಿಂದ, ದೇಹ ಯಾವ ಸ್ಥಿತಿಯಲ್ಲಿ ಇದೆ ಮತ್ತು ಹೇಗೆ ತರಬೇಕು ಎಂಬ ಬಗ್ಗೆ ಚರ್ಚಿಸಿದ್ದೇನೆ. ಸಾಧ್ಯವಾದರೆ 2– 3 ದಿನಗಳಲ್ಲಿ ತರಲು ಸಾಧ್ಯವೇ ಎಂಬ ಬಗ್ಗೆಯೂ ಮಾತನಾಡಿದ್ದೇನೆ. ಈ ಘಟನೆಯಿಂದ ದುಃಖಿತನಾಗಿದ್ದೇನೆ’ ಎಂದು ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.