ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಸಚಿವ ಸಂಪುಟ ಸಭೆಯ ಬಳಿಕ ತಮ್ಮ ನಿವಾಸ ‘ಕಾವೇರಿ’ಯಲ್ಲಿ ಸಂಪುಟ ಸಹೋದ್ಯೋಗಿಗಳ ಜತೆ ಭೋಜನ ಕೂಟ ನಡೆಸಿದ್ದು ರಾಜಕೀಯ ವ್ಯಾಖ್ಯಾನಗಳಿಗೆ ಕಾರಣವಾಯಿತು.
ಈ ವರ್ಷದ ಕೊನೆಯ ಸಂಪುಟ ಸಭೆಯ ಬಳಿಕ ಯಡಿಯೂರಪ್ಪನವರೇ ಊಟಕ್ಕೆ ಆಹ್ವಾನಿಸಿದರು. ಇದಕ್ಕಾಗಿ ಪೂರ್ವಭಾವಿಯಾಗಿ ವಿಶೇಷ ತಯಾರಿಯನ್ನು ನಡೆಸಿರಲಿಲ್ಲ. ಮನೆಯಲ್ಲಿ ಮಾಮೂಲಿ ಮಾಡುವ ಅಡುಗೆಯನ್ನೇ ಬಡಿಸಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಇಂದಿನ ಸಭೆ ಮುಗಿಸಿದ ಬಳಿಕ ಬಹುತೇಕ ಸಚಿವರು ತಮ್ಮ ಊರುಗಳಿಗೆ ಹೋಗುತ್ತಾರೆ. ಪುನಃ ಹೊಸ ವರ್ಷದಲ್ಲೇ ಸಿಗುವುದರಿಂದ ಮುಖ್ಯಮಂತ್ರಿಯವರ ಊಟಕ್ಕೆ ಕರೆದರು. ಬಹುತೇಕ ಸಚಿವರು ಹಾಜರಾಗಿದ್ದರು. ಮುಂದಿನ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಆಗಲಿದ್ದಾರೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು ಎಂದು ಮೂಲಗಳು ಹೇಳಿವೆ.
ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಚಾರಗಳು ಪ್ರಸ್ತಾಪವಾಗಲಿಲ್ಲ. ಬಜೆಟ್ ತಯಾರಿ ಸಂದರ್ಭದಲ್ಲಿ ಎಲ್ಲ ಶಾಸಕರು ಮತ್ತು ಸಚಿವರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ವಿಷಯ ಪ್ರಸ್ತಾಪಿಸಿದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.