ಆರ್.ಅಶೋಕ
ಬೆಂಗಳೂರು: ಕೇಂದ್ರದ ನೀತಿ ಆಯೋಗದ (NITI) ಉನ್ನತ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿರುವುದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನಿಮ್ಮಂತಹವರಿಗೆಲ್ಲ ಯಾಕೆ ಸ್ವಾಮಿ ರಾಜಕಾರಣ, ಸಾರ್ವಜನಿಕ ಜೀವನ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರು ಹಾಗು ಡಿಸಿಎಂ ಅವರಿಗೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಲು ಸಮಯವಿದೆ, ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಸಮಯವಿದೆ, ಕುರ್ಚಿಗೆ ಕಂಟಕ ಬಂದಾಗ ಹೈಕಮಾಂಡ್ ಮನೆಬಾಗಿಲು ತಟ್ಟಲು ದೆಹಲಿಗೆ ಹೋಗಲು ಸಮಯವಿದೆ, ಹುಟ್ಟುಹಬ್ಬಕ್ಕೆ ಕಬಿನಿಗೆ ಹೋಗಿ ಆನೆ, ಹುಲಿ ನೀಡಲು ಸಮಯವಿದೆ. I.N.D.I ಮಿತ್ರ ಪಕ್ಷ ಡಿಎಂಕೆ ಕರೆದಾಗ ಚೆನ್ನೈಗೆ ಹೋಗಿ ರಾಜಕೀಯ ಮಾಡಲು ಸಮಯವಿದೆ, ಎಐಸಿಸಿ ಸಭೆಗೆ ರಾಜಸ್ಥಾನದ ಜೈಪುರಕ್ಕೆ ಹೋಗಲು ಸಮಯವಿದೆ. ಆದರೆ, ರಾಜ್ಯದ, ದೇಶದ ಅಭಿವೃದ್ಧಿಗಾಗಿ, ಭವಿಷ್ಯಕ್ಕಾಗಿ ಪ್ರಧಾನಮಂತ್ರಿಗಳು, ದೇಶದ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚಿಂತನ ಮಂಥನ ನಡೆಸುವ ಅತ್ಯಂತ ಪ್ರಮುಖ ವೇದಿಕೆಯಾದ ನೀತಿ ಆಯೋಗದ ಸಭೆಗೆ ಹೋಗಲು, ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಹೋಗಲು ಇಬ್ಬರಿಗೂ ಪುರುಸೊತ್ತಿಲ್ಲ, ಆಸಕ್ತಿಯೂ ಇಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜಕಾರಣ ಅಂದರೆ ಮೋಜು, ಮಸ್ತಿ ಮಾಡುವ ಅಧಿಕಾರದ ಸುಪ್ಪತ್ತಿಗೆಯೇ ಹೊರತು ಜನಕಲ್ಯಾಣ ಅಥವಾ ಅಭಿವೃದ್ದಿಯ ಬಗ್ಗೆ ಆಸಕ್ತಿಯೂ ಇಲ್ಲ, ಬದ್ಧತೆಯೂ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಗೆ ಹೋಗದನ್ನು ಬಿಜೆಪಿಯ ಹಲವು ನಾಯಕರು ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.