
ಅಂತರರಾಷ್ಟ್ರೀಯ ಅಣಕಟ್ಟೆ ಸುರಕ್ಷತೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಟಿ.ಬಿ.ಜಯಚಂದ್ರ, ರಾಜ್ಭೂಷಣ್ ಚೌಧರಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜೊಹನ್ಸ್ ಕಾರ್ನೆಲ್ಸ್ ಮಾರಿಯಾ ಝಟ್ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ದೊಡ್ಡ ಅಣೆಕಟ್ಟೆಗಳನ್ನು ನಿರ್ಮಿಸುವುದು ಎಷ್ಟು ಮುಖ್ಯವೋ, ದೀರ್ಘಾವಧಿಯಲ್ಲಿ ಅವುಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಅದು ಇಂದಿನ ತುರ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರ ಜಲ ಆಯೋಗ ಮತ್ತು ವಿಶ್ವಬ್ಯಾಂಕ್ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ಅಂತರರಾಷ್ಟ್ರೀಯ ಅಣೆಕಟ್ಟೆ ಸುರಕ್ಷತೆ ಸಮ್ಮೇಳನ–2026’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಮೊದಲ ಪ್ರಧಾನಿ ನೆಹರೂ ಅವರು ಅಣೆಕಟ್ಟೆಗಳನ್ನು ‘ಆಧುನಿಕ ಭಾರತದ ದೇವಾಲಯಗಳು’ ಎಂದು ಕರೆದಿದ್ದರು. ಅವರ ಮಾತು ನಿಜ. ಅಣೆಕಟ್ಟೆಗಳ ಕಾರಣಕ್ಕೆ ದೇಶದಲ್ಲಿ ಕೃಷಿ ಕ್ಷೇತ್ರ ಪ್ರಗತಿ ಸಾಧಿಸಿದೆ, ಜಲವಿದ್ಯುತ್ನ ಕಾರಣದಿಂದ ಕೈಗಾರಿಕೆಗಳು ಬೆಳವಣಿಗೆಯಾಗಿವೆ ಮತ್ತು ಜನರ ಜೀವನಮಟ್ಟ ಸುಧಾರಿಸಿದೆ. ನಮ್ಮಲ್ಲಿ ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿಬಿಟ್ಟಿದ್ದೇವೆ. ಆದರೆ ಅವುಗಳ ಸುರಕ್ಷತೆಗೆ ಇನ್ನಷ್ಟು ಗಮನ ಕೊಡಬೇಕಿದೆ’ ಎಂದು ವಿವರಿಸಿದರು.
‘ಅಣೆಕಟ್ಟೆಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ, ಭೂಕಂಪ ಮತ್ತು ಅತೀವ ಪ್ರವಾಹದಿಂದ ಅದರ ರಚನೆಗೆ ಧಕ್ಕೆಯಾಗುತ್ತದೆ, ಶತ್ರು ದೇಶದವರು ಅವುಗಳ ನಾಶಕ್ಕೆ ಯತ್ನಿಸಲೂಬಹುದು. ಇವೆಲ್ಲಾ, ಅಣೆಕಟ್ಟೆಗಳು ಎದುರಿಸುತ್ತಿರುವ ಬಹು ಆಯಾಮದ ಅಪಾಯಗಳು. ಅಣೆಕಟ್ಟೆ ಅಥವಾ ನೀರಿಗೆ ರಾಜಕೀಯ ಗಡಿ ಇರುವುದಿಲ್ಲ, ಈ ಅಪಾಯಗಳೂ ರಾಜಕೀಯ ಗಡಿಯನ್ನು ಪರಿಗಣಿಸುವುದಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಕ್ಷಬೇಧ ಮರೆತು ಅಣೆಕಟ್ಟೆಗಳ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದರು.
ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನಮ್ಮ ದೇಶದಲ್ಲಿರುವ ಮೂರನೇ ಎರಡರಷ್ಟು ಅಣೆಕಟ್ಟೆಗಳು ಕನಿಷ್ಠ 25 ವರ್ಷಗಳಷ್ಟು ಹಳೆಯವು. ಹೀಗಾಗಿ ಅವುಗಳ ಸ್ಥಿತಿಗತಿಯ ಬಗ್ಗೆ ತುರ್ತಾಗಿ ಪರಿಶೋಧನೆ ನಡೆಸುವ ಅಗತ್ಯವಿದೆ. ಅವುಗಳಲ್ಲಿ ಹೂಳು ತುಂಬಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕ್ರೆಸ್ಟ್ಗೇಟ್ಗಳು ಸುಸ್ಥಿತಿಯಲ್ಲಿವೇ ಎಂಬುದನ್ನು ಪರಿಶೀಲಿಸಿ, ಅಗತ್ಯವಿದ್ದರೆ ಬದಲಿಸಬೇಕು’ ಎಂದರು.
‘ಈಗ ರಾಜ್ಯ ಸರ್ಕಾರಗಳು ಮತ್ತು ಸಂಬಂಧಿತ ಜಲ ನಿಗಮಗಳು ಕ್ರೆಸ್ಟ್ಗೇಟ್ಗಳ ಪರಿಶೀಲನೆ ಮತ್ತು ದುರಸ್ತಿ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರವು ಅಣೆಕಟ್ಟೆ ಪುನರುಜ್ಜೀವನ ಮತ್ತು ಸುಧಾರಣಾ ಕಾರ್ಯಕ್ರಮದ ಮೂಲಕ ಹಣ ಒದಗಿಸುತ್ತಿದೆ. ಆದರೆ, ಈ ಕಾರ್ಯಕ್ಕೆ ಇನ್ನಷ್ಟು ಪ್ರಬಲವಾದ ವ್ಯವಸ್ಥೆ ರೂಪಿಸಬೇಕು’ ಎಂದು ಒತ್ತಾಯಿಸಿದರು.
‘ಅಣೆಕಟ್ಟೆಯ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುವುದಕ್ಕೆ ನಿರ್ಬಂಧವಿದೆ. ಈ ನಿರ್ಬಂಧವನ್ನು ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರವು ಸಡಿಲಿಸಬೇಕು. ಅಣೆಕಟ್ಟೆಯ 500 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು’ ಎಂದರು.
ವಿಶ್ವ ಬ್ಯಾಂಕ್ನ ಉಪಾಧ್ಯಕ್ಷ ಜೊಹನ್ಸ್ ಕಾರ್ನೆಲ್ಸ್ ಮಾರಿಯಾ ಝಟ್, ‘ಭಾರತದಲ್ಲಿ ಅಣೆಕಟ್ಟೆ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾಗತಿಕ ಮಟ್ಟದ ಸುರಕ್ಷತಾ ಆಡಿಟ್ ಮತ್ತು ದುರಸ್ತಿ ಕಾರ್ಯಗಳನ್ನು ನಡೆಸಲು ಇನ್ನಷ್ಟು ಅವಕಾಶಗಳಿವೆ. ವಿಶ್ವಬ್ಯಾಂಕ್ ಈ ಕಾರ್ಯದಲ್ಲಿ ಬೆಂಬಲ ನೀಡಲಿದೆ’ ಎಂದರು.
ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಅನುಪಮ್ ಪ್ರಸಾದ್, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ರಾಜ್ಯದಲ್ಲಿ ಹಲವು ಬಹುಮುಖ್ಯ ನೀರಾವರಿ ಯೋಜನೆಗಳು ಬಾಕಿಯಾಗಿವೆ. ಅವುಗಳಲ್ಲಿ ಮೇಕೆದಾಟು ಸಮಾನಾಂತರ ಜಲಾಶಯ ಮತ್ತು ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಳು ಮುಖ್ಯವಾದವು. ಈ ಎರಡೂ ಯೋಜನೆಗಳಿಗೆ ಕೇಂದ್ರ ಸರ್ಕಾರವು ಶೀಘ್ರವೇ ಅನುಮತಿ ನೀಡುತ್ತದೆ ಎಂಬ ಭರವಸೆ ಇದೆ’ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
‘ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಲಿದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಎರಡೂ ಯೋಜನೆಗಳಿಗೆ ಅಗತ್ಯ ಅನುಮತಿ ಮತ್ತು ಅಧಿಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.