ಸಿದ್ದರಾಮಯ್ಯ
ಬೆಂಗಳೂರು: ‘ವಾಣಿಜ್ಯ ತೆರಿಗೆ ಸಂಗ್ರಹ ಸಂಬಂಧ ನೀಡಲಾಗಿರುವ ಗುರಿಯನ್ನು ಮುಟ್ಟಲೇಬೇಕು. ಅದಕ್ಕಾಗಿ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಸವಲತ್ತು, ಸಹಕಾರವನ್ನು ಒದಗಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಸಂಘದ ಸುವರ್ಣ ಮಹೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ತೆರಿಗೆ ಸಂಗ್ರಹ ಸರಿಯಾಗಿ ಆದರಷ್ಟೇ ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತದೆ. ಹೀಗಾಗಿ ಅಧಿಕಾರಿಗಳು ತಮ್ಮ ಹೊಣೆಗಾರಿಕೆ ಮನದಟ್ಟು ಮಾಡಿಕೊಂಡು ಕೆಲಸ ಮಾಡಬೇಕು. ತೆರಿಗೆ ಸೋರಿಕೆ ಇದೆ ಎಂಬುದನ್ನು ನೀವೂ ಒಪ್ಪುತ್ತೀರಿ, ನಾನೂ ಒಪ್ಪುತ್ತೇನೆ. ಅದನ್ನು ತಪ್ಪಿಸಿ. ಇಲ್ಲದೇ ಇದ್ದರೆ ಅಧಿಕಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.
‘ವಾಣಿಜ್ಯ ಇಲಾಖೆಗೆ ಈ ಸಾಲಿನಲ್ಲಿ ₹1.20 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ. ಆ ಗುರಿಯನ್ನು ಮುಟ್ಟಿ, ನೀವು ಸಲ್ಲಿಸಿರುವ ಹಲವು ಬೇಡಿಕೆಗಳನ್ನು ಈಡೇರಿಸುತ್ತೇವೆ. ನೀವು ₹1.20 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿಕೊಟ್ಟರೆ, ನಿಮಗಾಗಿ ನಾಲ್ಕೈದು ಕೋಟಿ ರೂಪಾಯಿ ವೆಚ್ಚ ಮಾಡುವುದು ಸರ್ಕಾರಕ್ಕೆ ದೊಡ್ಡ ವಿಷಯವೇನಲ್ಲ’ ಎಂದರು.
‘ನಿಮ್ಮ ಸಂಘದ ವತಿಯಿಂದ ಒಂದು ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದೀರಿ. ಅದನ್ನು ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ವೇತನ ತಾರತಮ್ಯವನ್ನು ನಿವಾರಿಸುತ್ತೇವೆ. ನಿಮ್ಮ ಕೆಲಸದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅಧಿಕಾರಿಗಳು ಹೊಣೆಗಾರಿಕೆ ಮರೆತು, ಕೆಲಸ ಮಾಡದೇ ಇದ್ದರೆ ಖಂಡಿತವಾಗಯೂ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.