ADVERTISEMENT

ವಿಜಯಪುರದಲ್ಲಿ ಬಸ್‌ಗೆ ಕಲ್ಲು: ಲಘು ಲಾಠಿ ಪ್ರಹಾರ

ಜಿ.ಪಂ. ಅಧ್ಯಕ್ಷೆಯಾಗಿ ಸುಜಾತಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 20:51 IST
Last Updated 30 ಜೂನ್ 2020, 20:51 IST
ಸುಜಾತಾ ಕಳ್ಳಿಮನಿ
ಸುಜಾತಾ ಕಳ್ಳಿಮನಿ   

ವಿಜಯಪುರ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆ ಸಂದರ್ಭದಲ್ಲಿ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ ನಡೆಯಿತು.

ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದ ಬಿಜೆಪಿ ಸದಸ್ಯರು ಖಾಸಗಿ ಬಸ್‌ನಲ್ಲಿ ಜಿಲ್ಲಾ ಪಂಚಾಯಿತಿ ಆವರಣಕ್ಕೆ ಬರುವ ವೇಳೆ ಬಿಜೆಪಿ ಕಾರ್ಯಕರ್ತರು ಕಲ್ಲುತೂರಿದ್ದರಿಂದ ಬಸ್ಸಿ‌ನ ಕಿಟಕಿ ಪುಡಿಯಾದವು. ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರ ನಡುವೆ ಬಿರುಸಿನ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಉದ್ರಿಕ್ತರು ತೂರಿದ ಕಲ್ಲಿನಿಂದ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಗಾಯಗೊಂಡರು.

ಸುಜಾತಾ ಅಧ್ಯಕ್ಷೆ: 42 ಸದಸ್ಯರ ಜಿಲ್ಲಾ ಪಂಚಾಯಿತಿಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತವಿರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾರವಾಡ ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಸುಜಾತಾ ಕಳ್ಳಿಮನಿ ಆಯ್ಕೆಯಾದರು.

ADVERTISEMENT

ಚುನಾವಣೆಯಲ್ಲಿ ಬಿಜೆಪಿಯ 20 ಸದಸ್ಯರ ಪೈಕಿ ನಾಲ್ವರು ಕಾಂಗ್ರೆಸ್‌ ಪರ, ಕಾಂಗ್ರೆಸ್‌ನ 18 ಸದಸ್ಯರ ಪೈಕಿ ಮೂವರು ಬಿಜೆಪಿ ಪರ, ಜೆಡಿಎಸ್‌ನ ಮೂವರು ಸದಸ್ಯರ ಪೈಕಿ ಇಬ್ಬರು ಕಾಂಗ್ರೆಸ್‌ ಪರ ಹಾಗೂ ಒಬ್ಬರು ಬಿಜೆಪಿ ಪರ ಮತ್ತು ಪಕ್ಷೇತರ ಸದಸ್ಯರೊಬ್ಬರು ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಸುಜಾತಾ ಪರವಾಗಿ 22 ಮತಗಳು ಹಾಗೂ ಪರಾಜಿತ ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಪರವಾಗಿ 20 ಮತಗಳು ಚಲಾವಣೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.