ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆರು ತಿಂಗಳು ಪೂರೈಸಿರುವ ಸಂದರ್ಭದಲ್ಲಿ ಅವರಿಗೆ ಆರು ಪ್ರಶ್ನೆಗಳನ್ನು ಕೇಳಿರುವ ರಾಜ್ಯ ಕಾಂಗ್ರೆಸ್, ನಿರುದ್ಯೋಗ, ಆರ್ಥಿಕ ಕುಸಿತ, ಆಂತರಿಕ ಭಿನ್ನಮತ ನಿವಾರಣೆಗೆ ಕೈಗೊಂಡ ಕ್ರಮಗಳ ಕುರಿತು ಉತ್ತರಿಸುವಂತೆ ಸವಾಲು ಹಾಕಿದೆ.
ಈ ಕುರಿತು ಕೆಪಿಸಿಸಿ ಟ್ವಿಟರ್ ಖಾತೆಯಿಂದ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದು, ‘ಬೊಮ್ಮಾಯಿ ಅವರೇ ಆರು ತಿಂಗಳ ಅವಧಿಯಲ್ಲಿ ಉದ್ಯೋಗ ಸೃಷ್ಟಿಗೆ ಕೈಗೊಂಡ ಕ್ರಮಗಳೇನು? ರೂಪಿಸಿದ ಯೋಜನೆಗಳೇನು? ಎಷ್ಟು ಉದ್ಯೋಗ ಸೃಷ್ಟಿಸಲಾಗಿದೆ? ಯಾವ ಯೋಜನೆಗಳಿಗೆ ಕೇಂದ್ರದಿಂದ ಎಷ್ಟು ಅನುದಾನ ತರಲಾಗಿದೆ? ಜಿಎಸ್ಟಿ ಪರಿಹಾರ, ನೆರೆ ಪರಿಹಾರಕ್ಕೆ ಎಷ್ಟು ನೆರವು ತಂದಿದ್ದೀರಿ?’ ಎಂದು ಪ್ರಶ್ನಿಸಲಾಗಿದೆ.
‘ಬಿಬಿಎಂಪಿ, ಬಿಡಿಎಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನೀರಾವರಿ ಇಲಾಖೆ, ನೇಮಕಾತಿಯಲ್ಲೂ ಭ್ರಷ್ಟಾಚಾರ, ಗುತ್ತಿಗೆಯಲ್ಲಿ ಶೇ 40ರಷ್ಟು ಕಮಿಷನ್ ಆರೋಪವಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಆರು ತಿಂಗಳಲ್ಲಿ ಕೈಗೊಂಡ ಕ್ರಮಗಳೇನು? ಜನತಾ ದರ್ಶನ ಕಾರ್ಯಕ್ರಮ ಏಕೆ ಮಾಡಿಲ್ಲ? ಉಪಯೋಗವಿಲ್ಲದ ದೆಹಲಿ ದರ್ಶನಕ್ಕೆ ಹೋಗುವ ನಿಮಗೆ ಜನತಾ ದರ್ಶನಕ್ಕೆ ಸಮಯವಿಲ್ಲವೆ?’ ಎಂದು ಕಾಂಗ್ರೆಸ್ ಕೇಳಿದೆ.
‘ಹಣಕಾಸು ಖಾತೆ ನಿಮ್ಮ ಬಳಿಯೇ ಇದೆ. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಲು ಯಾವ ಕ್ರಮ ಕೈಗೊಂಡಿದ್ದೀರಿ? ಆರ್ಥಿಕ ಶಿಸ್ತು ಕಾಪಾಡಲು ರೂಪಿಸಿದ ಯೋಜನೆಗಳೇನು?’ ಎಂದು ಸವಾಲು ಹಾಕಿದೆ.
‘ನಿಮ್ಮ ಸಚಿವರ ಬಗ್ಗೆ ನಿಮಗೆ ತೃಪ್ತಿ ಇದೆಯೆ? ಅಸಮಾಧಾನದಿಂದ ಒಲ್ಲದ ಖಾತೆ ನಿಭಾಯಿಸುತ್ತಿರುವವರು, ಉಸ್ತುವಾರಿಗಾಗಿ ಕಿತ್ತಾಡುವವವರು, ತಮ್ಮದೇ ಶಾಸಕರ ಜತೆ ಮುನಿಸು ಮಾಡಿಕೊಂಡ ಸಚಿವರು ನಿಮ್ಮಲ್ಲಿದ್ದಾರೆ. ಅವರ ಕೆಲಸಗಳ ಬಗ್ಗೆ ಸಮಾಧಾನ ಇದೆಯೆ?’ ಎಂದು ಕೆಪಿಸಿಸಿ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.