ಬೆಂಗಳೂರು: ‘ರೈತರ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವನೀತಿ ಹೊಂದಿದೆ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇದೀಗ ಊಸರವಳ್ಳಿ ನಾಟಕವಾಡುತ್ತಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ರೈತರ ಬಲವರ್ಧನೆಗೆ ಮತ್ತು ಆದಾಯ ಹೆಚ್ಚಿಸಲು ಕೃಷಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೃಷಿ ಕಾಯ್ದೆಗಳು ರೈತರ ಪರವಾಗಿದ್ದು, ಇದರಲ್ಲಿ ಯಾವುದೇ ಸಂಶಯಬೇಡ. ಈ ಬಗ್ಗೆ ಮನವರಿಕೆಯೂ ಮಾಡಿಕೊಡಲಾಗಿದೆ. ರೈತರು ಸರ್ಕಾರದ ಜೊತೆ ಸಹಕರಿಸಿ ಟ್ರ್ಯಾಕ್ಟರ್ ರ್ಯಾಲಿ ಪ್ರತಿಭಟನೆ ಕೈಬಿಡಬೇಕು’ ಎಂದು ಮನವಿ ಮಾಡಿದರು.
‘ಎಪಿಎಂಸಿ ರದ್ದುಪಡಿಸಿ ಬೆಂಬಲ ಬೆಲೆ ರದ್ದುಪಡಿಸಲಾಗುವುದು ಎಂದು ಕಾಂಗ್ರೆಸ್ 2019ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೇ ಹೇಳಿತ್ತು. ಆದರೆ, ನಾವು ಎಪಿಎಂಸಿ ರದ್ದು ಮಾಡುತ್ತಿಲ್ಲ. ರೈತ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಮುಕ್ತ ಅವಕಾಶ ಕಲ್ಪಿಸಿದೆ. ಲಾಭ–ನಷ್ಟಕ್ಕೆ ವ್ಯಾಪರಸ್ಥರು ಹೊಣೆಯಾಗುತ್ತಾರೆಯೇ ಹೊರತು ರೈತರಲ್ಲ’ ಎಂದರು.
‘ರೈತ ತನ್ನ ಬೆಳೆಯನ್ನು ತನಗೆ ಇಚ್ಛಿಸಿದ ಬೆಲೆಯಲ್ಲಿ ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಎಪಿಎಂಸಿಯಲ್ಲಿಯೂ ಮಾರಾಟ ಮಾಡಬಹುದಾಗಿದೆ’ ಎಂದು ಬಿ.ಸಿ.ಪಾಟೀಲ ಸ್ಪಷ್ಟಪಡಿಸಿದರು.
‘ರೈತರು ಪ್ರತಿಭಟನೆ ಕೈಬಿಡಬೇಕು. ರೈತರಿಗೆ ಅನುಕೂಲವಾಗಲಿದೆ. ಪೂರಕವಾಗಿಯೇ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗಿದೆ. ಪ್ರತಿಭಟನೆ ಕೈಬಿಟ್ಟು ಸರ್ಕಾರದ ಜೊತೆ ಸಹಕರಿಸಬೇಕು’ ಎಂದೂ ಅವರು ಮತ್ತೊಮ್ಮೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.