ADVERTISEMENT

ಮೋದಿ 'ಸಾವನ್ನು ಸಂಭ್ರಮಿಸುವ ವ್ಯಕ್ತಿ' ಎಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 11:42 IST
Last Updated 19 ಏಪ್ರಿಲ್ 2021, 11:42 IST
   

ಬೆಂಗಳೂರು: ಕೋವಿಡ್‌ ಪ್ರಕರಣ ಹೆಚ್ಚಾಗಿತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಟ್ವೀಟ್‌ ಸಮರ ತಾರಕಕ್ಕೆ ಏರಿದೆ. ಸಾವನ್ನು ಸಂಭ್ರಮಿಸುವ ವ್ಯಕ್ತಿ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಮಾಡಿರುವ ಟ್ವೀಟ್‌ಗೆ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ಟ್ವೀಟ್‌ ಮೂಲಕ ‘ಗುಜರಾತ್‌ ಗಲಭೆ ಸಾವಿರ ಜನ, ನೋಟ್‌ ಬ್ಯಾನ್‌ ನೂರಾರು ಜನ, ರೈತ ಹೋರಾಟ 300 ಕ್ಕೂ ಹೆಚ್ಚು ಜನ, ವಲಸೆ ಕಾರ್ಮಿಕರು ಸಾವಿರಾರು ಜನ. ಸಾವಿನ ಮೆರವಣಿಗೆಯನ್ನೇ ಮಾಡಿದ ಇತಿಹಾಸ ಹೊಂದಿದ ಕೊಲೆಗಡುಕ ಫಕೀರನಿಗೆ ಕೊರೋನಾ ಸಾವುಗಳಿಂದ ಹೃದಯ ಕರಗದು. ಆತ ಸಾವುಗಳನ್ನು ಸಂಭ್ರಮಿಸುವ ವಿಕೃತ ವ್ಯಕ್ತಿ’ ಎಂದು ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಇಂತಹ ಮಾತುಗಳಿಂದ ಮೋದಿ ವಿಚಲಿತರಾಗುತ್ತಾರೆ ಎನ್ನುವ ಭ್ರಮೆಯಿಂದ ಕಾಂಗ್ರೆಸ್‌ ಹೊರಗೆ ಬರಬೇಕು. ನಕಲಿ ಗಾಂಧಿ ಪರಿವಾರದ ಇಟಲಿ ಪ್ರಜೆ ಈ ಹಿಂದೆ, ಮೋದಿ ಸಾವಿನ ವ್ಯಾಪಾರಿ ಎಂದಿದ್ದರು. ಈ ಮಾತಿಗೆ ಜನರೇ ತಕ್ಕ ಉತ್ತರವನ್ನೇ ನೀಡಿದ್ದರು. ಇಂದಿರಾ ಗಾಂಧಿಯ ಹತ್ಯೆಯ ನಂತರ ಕಾಂಗ್ರೆಸ್‌ ಮಾಡಿದ ಸಿಖ್‌ ಹತ್ಯಾಕಾಂಡವನ್ನು ದೇಶ ಮರೆತಿಲ್ಲ’ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.