ಬೆಂಗಳೂರು: 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜನಕಲ್ಯಾಣ ಸಮಾವೇಶ ಆಗಿದೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲೇ ಶೀಘ್ರದಲ್ಲೇ ದೊಡ್ಡ ರಾಜಕೀಯ ಸ್ಫೋಟ ಆಗಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅಶೋಕ, 'ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ಅದೇನು 'ಒಪ್ಪಂದ' ಆಗಿದೆಯೋ, ಆ 'ಒಪ್ಪಂದ' ಕಾರ್ಯಗತ ಆಗೋಲ್ಲ ಅನ್ನೋ ಅನುಮಾನ ಡಿ.ಕೆ.ಶಿವಕುಮಾರ್ ಅವರಿಗೆ ಯಾಕೆ ಕಾಡುತ್ತಿದೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಶೀಘ್ರದಲ್ಲೇ ದೊಡ್ಡ ರಾಜಕೀಯ ಸ್ಫೋಟವಾಗುವ ಎಲ್ಲ ಲಕ್ಷಣಗಳಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ' ಎಂದು ಹೇಳಿದ್ದಾರೆ.
'ಡಿಕೆಶಿ ಅವರೇ, ತಾವು ಚೆಸ್ ಆದರೂ ಆಡಿ, ಫುಟ್ಬಾಲ್ ಆದರೂ ಆಡಿ, ಆದರೆ ನಿಮ್ಮ ರಾಜಕೀಯ ಮೇಲಾಟದಲ್ಲಿ ಕನ್ನಡಿಗರ ಬದುಕಿನ ಜೊತೆ ಮಾತ್ರ ಚೆಲ್ಲಾಟವಾಡಬೇಡಿ. ತಮ್ಮ loyaltyಗೆ ತಮ್ಮ ಹೈಕಮಾಂಡ್ rotalty ಕೊಡುತ್ತೋ ಬಿಡುತ್ತೋ ಅದು ನಿಮ್ಮ ಪಕ್ಷದ ಆಂತರಿಕ ವಿಚಾರ, ಆದರೆ ಕಾಂಗ್ರೆಸ್ ಪಕ್ಷಕ್ಕೆ loyal ಆಗಿ ಮತ ನೀಡಿ ಅಧಿಕಾರ ಕೊಟ್ಟಿರುವ ಕರ್ನಾಟಕದ ಮಾತದಾರರಿಗೆ ಅಭಿವೃದ್ಧಿಯ royalty ಕೊಟ್ಟು ಕನ್ನಡಿಗರ ಋಣ ತೀರಿಸಿ' ಎಂದು ಹೇಳಿದ್ದಾರೆ.
'ನೀವು ವ್ಯಕ್ತಿ ಪೂಜೆ ಆದರೂ ಮಾಡಿ, ಪಕ್ಷ ಪೂಜೆ ಆದರೂ ಮಾಡಿ, ಆದರೆ ಕಾಂಗ್ರೆಸ್ ಪಕ್ಷವನ್ನು ನಂಬಿ ಅಧಿಕಾರ ಕೊಟ್ಟಿರುವ ಮತದಾರ ಪ್ರಭುಗಳಿಗೆ ದ್ರೋಹ ಬಗೆಯಬೇಡಿ' ಎಂದು ಹೇಳಿದ್ದಾರೆ.
ಈ ಮೊದಲು ‘ಪ್ರದೇಶ ಕಾಂಗ್ರೆಸ್ ಸಮಿತಿ, ಸ್ವಾಭಿಮಾನಿಗಳ ಒಕ್ಕೂಟದ ಆಶ್ರಯದಲ್ಲಿ ಡಿ.5 ರಂದು ಹಾಸನದಲ್ಲಿ ಜನಕಲ್ಯಾಣ ಸಮಾವೇಶ ನಡೆಸಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.