ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಸೇರಿದಂತೆ ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ ಮತ್ತಷ್ಟು ತಡವಾಗುವ ಸಾಧ್ಯತೆಗಳಿವೆ.
ಈಗಾಗಲೇ ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಪಕ್ಷದ ನಾಯಕರು ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೆ ಕಳೆದುಕೊಂಡಿರುವ ಅಧಿಕಾರವನ್ನು ಮತ್ತೊಮ್ಮೆ ಪಡೆಯಲು ಕಾರ್ಯತಂತ್ರ ರೂಪಿಸುವ ಕೆಲಸದಲ್ಲಿ ಕಾಂಗ್ರೆಸ್ ವರಿಷ್ಠರು ನಿರತರಾಗಿದ್ದಾರೆ. ಜತೆಗೆ ಜ. 11ರಂದು ನವದೆಹಲಿಯಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಪ್ರಮುಖವಾಗಿ ದೆಹಲಿ ಚುನಾವಣೆ ಬಗ್ಗೆ ಚರ್ಚಿಸುವ ಸಾಧ್ಯತೆಗಳಿದ್ದು, ನಂತರ ದೆಹಲಿ ಚುನಾವಣೆಯತ್ತ ಗಮನ ಹರಿಸಲಿದ್ದಾರೆ.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿವಿದೇಶ ಪ್ರವಾಸದಿಂದ ಮೊನ್ನೆಯಷ್ಟೇ ವಾಪ ಸಾಗಿದ್ದು, ಚುನಾವಣೆ ವಿಚಾರ ಹೊರತು ಪಡಿಸಿ ರಾಜ್ಯದ ಸಮಸ್ಯೆಗಳ ಕಡೆಗೆ ಗಮನಕೊಟ್ಟಿಲ್ಲ.
ದೆಹಲಿಯತ್ತ ಚಿತ್ತ: ರಾಜ್ಯಕ್ಕೆ ವೀಕ್ಷಕರನ್ನು ಕಳುಹಿಸಿ ವರದಿ ಪಡೆದುಕೊಳ್ಳಲಾಗಿದ್ದು,ಹಿರಿಯ ನಾಯಕರ ನಡುವಿನ ಮನಸ್ತಾಪ ಕಡಿಮೆಮಾಡುವ ಪ್ರಯತ್ನವನ್ನಷ್ಟೇ ವರಿಷ್ಠರು ಮಾಡಿ ದ್ದಾರೆ.ಜನವರಿ ಮೊದಲ ವಾರದಲ್ಲಿ ರಾಜ್ಯದ ನಾಯಕರನ್ನು ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗಿತ್ತು.ಆದರೆ ಈವರೆಗೂ ರಾಜ್ಯದ ಮುಖಂಡರಿಗೆ ಆಹ್ವಾನ ಬಂದಿಲ್ಲ. ವರಿಷ್ಠರ ಆಹ್ವಾನವನ್ನು ರಾಜ್ಯ ನಾಯಕರು ಎದುರು ನೋಡುತ್ತಿದ್ದಾರೆ.
ರಾಜೀನಾಮೆ ನೀಡಿ ತಿಂಗಳಾಯಿತು
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಒಂದು ತಿಂಗಳಾಯಿತು. ಈಗಾಗಲೇ ಕೆಪಿಸಿಸಿ ಪದಾಧಿಕಾರಿಗಳನ್ನು ವಿಸರ್ಜಿಸಿದ್ದು, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಏಕಮಾತ್ರ ಪದಾಧಿಕಾರಿ. ರಾಜೀನಾಮೆ ನಂತರ ಸಿದ್ದರಾಮಯ್ಯ, ದಿನೇಶ್ ಕಚೇರಿಯತ್ತ ಸುಳಿದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.