ಹುಬ್ಬಳ್ಳಿ: 'ರಾಜಕಾರಣದಲ್ಲಿ ಕೆಟ್ಟ ಸಂಸ್ಕೃತಿ ಬರಲು ಕಾಂಗ್ರೆಸ್ ಮಹಾದ್ವಾರವೇ ಮೂಲ ಕಾರಣವಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
'ಸ್ಯಾಂಟ್ರೋ ರವಿಯಂಥ ರೌಡಿ ಬಿಜೆಪಿಯಲ್ಲಿ ಇರಲು ಮಾತ್ರ ಸಾಧ್ಯ' ಎಂದು ಕಾಂಗ್ರೆಸ್ ಮುಖಂಡ ದಿನೇಶ ಗುಂಡೂರಾವ್ ಮಾಡಿರುವ ಟ್ವಿಟ್'ಗೆ ಗುರುವಾರ ನಗರದ ವಿಮಾನ ನಿಲ್ದಾಣದಲ್ಲಿ ಅವರು ಪ್ರತಿಕ್ರಿಯಿಸಿದರು.
'ಕಾಂಗ್ರೆಸ್ ರಾಜಕೀಯ ದಿವಾಳಿತನಕ್ಕೆ ತಲುಪಿದೆ. ಅಲ್ಲಿ ಎಂತೆಂಥವರು ಇದ್ದಾರೆ ಎನ್ನುವುದು ದಿನೇಶ ಗುಂಡೂರಾವ್ ಅವರಿಗೆ ತಿಳಿದಿದೆ. ಅವರಂಥ ಕೀಳು ಮಟ್ಟಕ್ಕೆ ನಾನು ಹೋಗುವುದಿಲ್ಲ. ಮೊದಲು ಅವರ ಮನೆ ಸ್ವಚ್ಛಮಾಡಿಕೊಳ್ಳುವುದನ್ನು ಕಲಿಯಲಿ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಹೌದೋ ಅಲ್ಲವೋ ಎಂದು ಪರಿಶೀಲನೆ ಮಾಡಲು ಹೇಳುತ್ತೇನೆ' ಎಂದರು.
'ಕಾಂಗ್ರೆಸ್ ಮುಖಂಡರು ಹತಾಶರಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಹೇಗಾದರೂ ಮಾಡಿ ಮುಂಬರುವ ಚುನಾವಣೆ ಗೆಲ್ಲಬೇಕೆಂದು ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ಉಚಿತ ವಿದ್ಯುತ್ ಪೂರೈಸುವ ಭರವಸೆ ನೀಡಿದ್ದಾರೆ. ಅವರ ಅವಧಿಯಲ್ಲಿ ಆರು ತಾಸು ವಿದ್ಯುತ್ ನೀಡಲು ಸಾಧ್ಯವಾಗಿಲ್ಲ. ಉಚಿತ ಹೇಗೆ ನೀಡುತ್ತಾರೆ' ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.