ADVERTISEMENT

ಜಗ್ಗಿ ವಾಸುದೇವ್‌ ಹಳೆ ಪ್ರಕರಣ ಕೆದಕಿ ರಮ್ಯಾ ಟ್ವೀಟ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 2:29 IST
Last Updated 7 ಮಾರ್ಚ್ 2019, 2:29 IST
   

ಬೆಂಗಳೂರು:ಸದ್ಗುರು ಜಗ್ಗಿ ವಾಸುದೇವ್ ಅವರ ವಿರುದ್ಧದ ಹಳೆಯ ಪ್ರಕರಣವೊಂದನ್ನು ಕೆದಕಿಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಜಗ್ಗಿ ವಾಸುದೇವ್ ವಿರುದ್ಧ ಅಪರಾಧ ಪ್ರಕರಣದ ದಾಖಲಾದ ಬಗ್ಗೆ1997ರ ಅಕ್ಟೋಬರ್ 10ರಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಆದರೆ ನಂತರ ಕೊಯಮತ್ತೂರು ಪೊಲೀಸರು ಆ ಪ್ರಕರಣವನ್ನು ವಜಾಗೊಳಿಸಿದ್ದರು. ಆ ವರದಿಯನ್ನು ಲಗತ್ತಿಸಿ ಟ್ವೀಟ್ ಮಾಡಿರುವ ರಮ್ಯಾ, ‘ಇವರು ಹೇಗೆ ಬೀದಿಗಳಲ್ಲಿ ನಡೆಯಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಅನೇಕರು ರಮ್ಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

‘ಇದು ಗಾಂಧಿ ಕುಟುಂಬಕ್ಕೂ ಅನ್ವಯವಾಗುತ್ತದೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಸದ್ಗುರು ವಿರುದ್ಧ ಯಾವುದೇ ಪ್ರಕರಣ ಇಲ್ಲ’ ಎಂದು ನಾದನ್ ಚೊರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ರಾಗಾ ಕೂಡ ಸುಕನ್ಯಾ ದೇವಿ ಮೇಲಿನ ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದಾರೆ. ಆದರೆ ಅವರು ಆರಾಮವಾಗಿ ಹೊರಗಡೆ ಓಡಾಡಿಕೊಂಡಿದ್ದಾರೆ ಹೇಗೆ?’ ಎಂದು ಆರ್‌ಕೆ.ಮುತ್ತು ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಶಶಿ ತರೂರ್ ಕೂಡ ಒಬ್ಬ ದೇವಮಾನವರೇ?’ ಎಂದು ಪ್ರಿಯಾಂಕಾ ಶರ್ಮಾ ಎಂಬುವವರು ಪ್ರಶ್ನಿಸಿದ್ದಾರೆ.

ರಮ್ಯಾ ಟ್ವೀಟ್ ಮಾಡಿದ್ದು ಯಾಕೆ?

ಟೈಮ್ಸ್‌ ನೌ ಸುದ್ದಿವಾಹಿನಿಗೆ ಈಚೆಗೆ ಸಂದರ್ಶನ ನೀಡಿದ್ದ ಜಗ್ಗಿ ವಾಸುದೇವ್ ಪುಲ್ವಾಮಾ ದಾಳಿ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ್ದರು. ಈ ವೇಳೆ ಜೆಎನ್‌ಯು (ಜವಹರಲಾಲ್‌ ನೆಹರು ವಿಶ್ವವಿದ್ಯಾಲಯ) ವಿದ್ಯಾರ್ಥಿ ನಾಯಕ ಉಮರ್ ಖಾಲೀದ್ ಮತ್ತು ಕನ್ಹಯ್ಯಾ ಕುಮಾರ್ ಬಗ್ಗೆ ಕೇಳಲಾದ ಪ್ರಶ್ನೆಗೆ (ಇವರಿಬ್ಬರ ವಿರುದ್ಧ 2016ರಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿತ್ತು), ‘ಅವರು ಬೀದಿಗಳಲ್ಲಿ ಓಡಾಡಬಾರದು’ ಎಂದು ಉತ್ತರಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

‘ಈ ಅನಾರೋಗ್ಯಪೀಡಿತ, ಹಿಂಸಾತ್ಮಕ ಹಾಗೂ ಪೂರ್ವಾಗ್ರಹದಿಂದ ಕೂಡಿದ ವ್ಯಕ್ತಿಯನ್ನು ಆಧ್ಯಾತ್ಮಿಕ ಗುರು ಎನ್ನಲು ಸಾಧ್ಯ?...’ ಎಂದು ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದರು.

2018ರ ಆಗಸ್ಟ್‌ನಲ್ಲಿಯೂ ಸದ್ಗುರು ವಿರುದ್ಧ ರಮ್ಯಾ ಟ್ವೀಟ್ ಮಾಡಿದ್ದರು. ಸದ್ಗುರು ಅವರು ನಟಿ ಕಂಗನಾ ರನೋಟ್ ಜತೆ ಸಂವಾದ ನಡೆಸುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು.

ಇನ್ನಷ್ಟು ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.