ADVERTISEMENT

ಕಾಂಗ್ರೆಸ್‌ ನಾಯಕರೇ ನಪುಂಸಕರು: ಸುನಿಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:31 IST
Last Updated 29 ಮೇ 2022, 19:31 IST
ವಿ. ಸುನಿಲ್‌ ಕುಮಾರ್
ವಿ. ಸುನಿಲ್‌ ಕುಮಾರ್   

ಬೆಂಗಳೂರು: ಹುಬ್ಬಳ್ಳಿ ಮತ್ತು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಡದೇ ನಪುಂಸಕರಾಗಿ ವರ್ತಿಸಿದ್ದು ಕಾಂಗ್ರೆಸ್‌ ನಾಯಕರು ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್‌ ಕಿಡಿಕಾರಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಇತರ ನಾಯಕರು ಮಾನಸಿಕ ವೇದನೆಗೆ ಒಳಗಾದಂತೆ ವರ್ತಿಸುತ್ತಿದ್ದಾರೆ. ಮೋದಿ ಮತ್ತು ಬೊಮ್ಮಾಯಿ ಅವರ ಜನಪರ ಆಡಳಿತವನ್ನು ಸಹಿಸದೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಭಯೋತ್ಪಾದಕರ ಮುಂದೆ ಮಂಡಿಯೂರಿದ್ದು ಕಾಂಗ್ರೆಸ್‌ ನಾಯಕರು. ಭಯೋತ್ಪಾದಕರುದೇಶದಲ್ಲಿ ಅಟ್ಟಹಾಸ ಮೆರೆಯುವಾಗ ನಪುಂಸಕರಂತೆ ವರ್ತಿಸಿದ್ದು ಕಾಂಗ್ರೆಸ್‌ ಅಲ್ಲವೇ? ಆರ್‌ಎಸ್‌ಎಸ್‌ನ ಮೋದಿ ಬಂದ ಬಳಿಕ ಭಯೋತ್ಪಾದಕರನ್ನು ಬಗ್ಗು ಬಡಿಯಲಿಲ್ಲವೆ ಎಂದು ಪ್ರಶ್ನಿಸಿದರು.

ADVERTISEMENT

ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಲು ಸಾಧ್ಯವಾಗಿದ್ದು ಮೋದಿ ಪ್ರಧಾನಿ ಆದ ಬಳಿಕ. ಕಾಂಗ್ರೆಸ್‌ ನಾಯಕರು ನಪುಂಸಕರಾಗಿದ್ದರಿಂದಲೇ ಅಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಡಲಿಲ್ಲ. ಆದ್ದರಿಂದ ಕಾಂಗ್ರೆಸ್‌ಗೆ ರಾಷ್ಟ್ರಧ್ವಜದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದೂ ಸುನಿಲ್‌ ತಿಳಿಸಿದರು.

‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಎಂದೂ ಆಡಳಿತ ಮತ್ತು ನಡವಳಿಕೆಯಲ್ಲಿ ದೇಶದ ಹಿತ ಕಾಯುವ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಿಸಲು, ದೇಶದ ಗಡಿ ರಕ್ಷಿಸಲು ಮತ್ತು ಭಯೋತ್ಪಾದಕರ ಹುಟ್ಟಡಗಿಸಲು ಆರ್‌ಎಸ್‌ಎಸ್‌ನ ಮೋದಿ ಬರಬೇಕಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.