ADVERTISEMENT

ರಾಷ್ಟ್ರಧ್ವಜ: ಧಮ್ಮಚಕ್ರ ಬದಲಾವಣೆಗೆ ಯತ್ನ– ಖರ್ಗೆ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಆರೋಪ

​ಪ್ರಜಾವಾಣಿ ವಾರ್ತೆ
Published 16 ಮೇ 2022, 18:54 IST
Last Updated 16 ಮೇ 2022, 18:54 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ‘ವಿಶ್ವದ ಸಹಿಷ್ಣುತೆಗೆ ಗೌತಮ ಬುದ್ಧಕೊಟ್ಟ ಕಾಣಿಕೆ ದೊಡ್ಡದು. ಆ ಕಾರಣಕ್ಕಾಗಿಯೇ
ನಮ್ಮ ರಾಷ್ಟ್ರಧ್ವಜದಲ್ಲಿ ‘ಧಮ್ಮಚಕ್ರ’ಕ್ಕೂ ಸ್ಥಾನ ನೀಡಲಾಗಿದೆ. ಆದರೆ, ಕೆಲವರು ಅದನ್ನೂ ಬದಲಿಸುವ ಯತ್ನ ನಡೆಸಿದ್ದಾರೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿನ ಬುದ್ಧ ವಿಹಾರದಲ್ಲಿ ಸೋಮವಾರ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದೇಶದಲ್ಲಿ ಈಗ ಅಸಮಾನತೆ, ಅಸ್ಪೃಶ್ಯತಾ ನಡೆಗಳನ್ನು ಬದಲಾಯಿಸಬೇಕಿದೆ. ಅದನ್ನು ಬಿಟ್ಟು ಬೇರೆ ಏನೇನೋ ಬದಲಾಯಿಸಲು ಹೊರಟಿದ್ದಾರೆ. ರಾಷ್ಟ್ರಧ್ವಜದಲ್ಲಿ ಧಮ್ಮಚಕ್ರ (ಅಶೋಕ ಚಕ್ರ) ಇರುವುದರಿಂದ ಯಾರಿಗೆ ಏನು ಕೆಟ್ಟದ್ದಾಗಿದೆ ಹೇಳಿ’ ಎಂದೂ ಪ್ರಶ್ನಿಸಿದರು.

‘ಭಾರತದಲ್ಲಿ ಧರ್ಮ ಸಹಿಷ್ಣುತೆ ಎಷ್ಟಿದೆ ಎಂಬುದನ್ನು ನೋಡಬೇಕೆಂದರೆ ನೀವು ಬುದ್ಧನನ್ನು
ನೋಡಿ’ ಎಂದು ಸ್ವಾಮಿ ವಿವೇಕಾನಂದರು ಶಿಕಾಗೋ ಸರ್ವ ಧರ್ಮ ಸಮ್ಮೇಳನದಲ್ಲಿ ಹೇಳಿದ್ದರು. ಬುದ್ಧ
ತಾನು ವಿಷ ಕುಡಿದು ಜೀವತೆತ್ತರೂ ಇನ್ನೊಬ್ಬರನ್ನು ಬದುಕಿಸಿದ. ಅಂಥ ತ್ಯಾಗ, ಸಹಿಷ್ಣುತೆ ನಮ್ಮಲ್ಲಿದೆ ಎಂದು ವಿವೇಕಾನಂದರು ಬಿಂಬಿಸಿದರು. ಆದರೆ, ಶಿಕಾಗೊ ಭಾಷಣದ ಬಗ್ಗೆ ಮಾತನಾಡುವವರೆಲ್ಲ ಈ ಅಂಶವನ್ನು ಮರೆಮಾಚುತ್ತಲೇ ಬಂದಿದ್ದಾರೆ. ಒಂದೆಡೆ ದೇವಸ್ಥಾನದ ಒಳಗೆ ಹೋಗಲು ಬಿಡುವುದಿಲ್ಲ. ಇನ್ನೊಂದೆಡೆ ನಮ್ಮ ಧರ್ಮ– ನಮ್ಮ ಧರ್ಮ ಎಂದು ಬಡಿದುಕೊಳ್ಳುತ್ತಾರೆ. ಧರ್ಮ ಎಂಬುದು ಇವರೊಬ್ಬರ ಹಿತಕ್ಕಾಗಿ ಮಾಡಿದ್ದಲ್ಲ, ಅದು ಎಲ್ಲರ ಉದ್ಧಾರಕ್ಕಾಗಿ ಇದೆ. ಬೇರೊಬ್ಬರ ಧರ್ಮವನ್ನು ಟೀಕಿಸುವ ಬದಲು ನಮ್ಮ ಧರ್ಮದ ತತ್ವಗಳನ್ನು ನಾವು ಸರಿಯಾಗಿ ಪಾಲಿಸಿದರೆ ಸಾಕು’ ಎಂದು ಸಲಹೆ ನೀಡಿದರು.

ADVERTISEMENT

‘ದೇಶದಲ್ಲಿದ್ದ ಬಹಳಷ್ಟು ಬುದ್ಧ ವಿಹಾರಗಳನ್ನು ಮುಚ್ಚಿ, ಅದರೊಳಗೆ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಜಗಳ ಹಚ್ಚುತ್ತಿದ್ದೇನೆ ಎಂದು ಪ್ರಚಾರ ಮಾಡುತ್ತಾರೆ. ನಿಮ್ಮ ಧರ್ಮವನ್ನು ನೀವು ಅನುಸರಿಸಿ, ಅವರ ಧರ್ಮವನ್ನು ಅವರಿಗೆ ಅನುಸರಿಸಲು ಬಿಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.