ಚಿಂಚೋಳಿ (ಕಲಬುರ್ಗಿ ಜಿಲ್ಲೆ): ‘ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಾಗ ಭಾವುಕ ಕ್ಷಣ ಕಳೆದಿದ್ದೇನೆ’ ಎಂದು ಡಾ.ಉಮೇಶ ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ನನ್ನ ಜೀವನದಲ್ಲಿ ಇದು ಎರಡನೆಯ ರಾಜೀನಾಮೆ ಆಗಿದೆ. ಕಷ್ಟಪಟ್ಟು ಅಭ್ಯಾಸ ಮಾಡಿ ಎಂಬಿಬಿಎಸ್ ಎಂ.ಎಸ್ ಪದವಿ ಪಡೆದು ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ ಹುದ್ದೆಗೆ ರಾಜೀನಾಮೆ ನೀಡುವಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು’ ಎಂದರು.
‘ಆಗ ಒತ್ತರಿಸಿ ಬಂದಿದ್ದ ದುಃಖವನ್ನು ಸಹಿಸುವ ಶಕ್ತಿ ನೀಡಿದವರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್. ಜೀವನದಲ್ಲಿ ಮುಂದೆ ಬರಬೇಕಾದರೆ ಅಪಾಯಕಾರಿ ಸವಾಲು ಎದುರಿಸಲು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದರು. ಜನರ ಸೇವೆಯ ಮುಂದೆ ನಾನು ಪಡೆದ ಹುದ್ದೆ ಗೌಣ ಎನಿಸಿತು. ಆಗ ಗಟ್ಟಿ ನಿರ್ಧಾರ ಮಾಡಿ ರಾಜೀನಾಮೆ ಸಲ್ಲಿಸಿದ್ದೆ. ಸೋಮವಾರ ಸ್ಪೀಕರ್ ರಮೇಶಕುಮಾರ್ ಕೈಗೆ ರಾಜೀನಾಮೆ ಪತ್ರ ಸಲ್ಲಿಸುವಾಗಲೂ ಕಣ್ತುಂಬಿ ಬಂದಿತ್ತು. ಆದರೆ ಸ್ಪೀಕರ್ ಅವರ ಮುಖ ಚರ್ಯೆ ನನ್ನ ದುಃಖ ತಡೆಯಿತು’ ಎಂದರು.
‘ಅಂದು ನನಗೆ ನನ್ನ ಶಕ್ತಿಯ ಅರಿವಿರಲಿಲ್ಲ. ಈಗ ಜನರು ನಿಮ್ಮ ಜತೆಗೆ ನಾವಿದ್ದೇವೆ ಎಂದು ಹುರಿದುಂಬಿಸಿ ಶಕ್ತಿ ತುಂಬಿದ್ದಾರೆ. ಹೀಗಾಗಿ ಜನಶಕ್ತಿಗೆ ತಲೆಬಾಗಿ ನನ್ನ ರಾಜಕೀಯ ಜೀವನದ 2ನೇ ಅಧ್ಯಾಯ ಆರಂಭಿಸಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.