
ಬೆಂಗಳೂರು: ಆಡಳಿತರೂಢ ಕಾಂಗ್ರೆಸ್ನ ಸುಮಾರು 25ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ತಂಡ ಮಂಗಳವಾರ (ಫೆ. 17) ವಿದೇಶ ಪ್ರವಾಸಕ್ಕೆ ತೆರಳಲಿದೆ.
ಶಾಸಕರಾದ ಪುಟ್ಟರಂಗಶೆಟ್ಟಿ, ಎಚ್.ಡಿ. ತಮ್ಮಯ್ಯ, ದೇವೇಂದ್ರಪ್ಪ, ಅಲ್ಲಮ ಪ್ರಭು ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಮಹಾಂತೇಶ ಕೌಜಲಗಿ, ರಾಘವೇಂದ್ರ ಹಿಟ್ನಾಳ್, ಅನಿಲ್ ಚಿಕ್ಕಮಾದು, ರಘುಮೂರ್ತಿ ಮತ್ತಿತರರು ಆಸ್ಪ್ರೇಲಿಯಾ, ನ್ಯೂಜಿಲೆಂಡ್ಗೆ ತೆರಳಲಿದ್ದು, ಮಾರ್ಚ್ 3ರಂದು ವಾಪಸಾಗಲಿದ್ದಾರೆ.
‘ನಾನು ವಿದೇಶ ಪ್ರವಾಸ ಕೈಗೊಳ್ಳುವುದಿಲ್ಲ’ ಎಂದು ಸಚಿವ ಕೆ. ವೆಂಕಟೇಶ್ ಹೇಳಿದ್ದರೂ ವಿದೇಶ ಪ್ರವಾಸಕ್ಕೆ ತೆರಳುವವರ ಪಟ್ಟಿಯಲ್ಲಿ ಅವರ ಹೆಸರೂ ಇದೆ.
ನಾಯಕತ್ವ ಬದಲಾವಣೆ ವಿಚಾರದ ಚರ್ಚೆಯ ಮಧ್ಯೆಯೇ ಕಾಂಗ್ರೆಸ್ನ 35 ಶಾಸಕರ ತಂಡ ವಿದೇಶ ಪ್ರವಾಸ ಕೈಗೊಳ್ಳುವ ಮಾತು ಕೇಳಿಬಂದಿತ್ತು. ಶಾಸಕರು ವೈಯಕ್ತಿಕವಾಗಿ ವಿದೇಶ ಪ್ರವಾಸ ಕೈಗೊಂಡರೆ ತಪ್ಪೇನು ಎಂಬ ಧಾಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.
‘ಶಾಸಕರ ಉದ್ದೇಶಿತ ವಿದೇಶ ಪ್ರವಾಸವು ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವರಿಷ್ಠರ ಗಮನಕ್ಕೆ ತಂದಿದ್ದರು ಎಂದು ಹೇಳಲಾಗಿತ್ತು. ಬಳಿಕ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪ್ರವಾಸ ಕೈಗೊಳ್ಳದಂತೆ ಸೂಚನೆ ನೀಡಿದ್ದರು ಎಂದೂ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.