ADVERTISEMENT

ಅಳಲು ತೋಡಿಕೊಂಡ ರೈತರ ಮೇಲೆ ದಬ್ಬಾಳಿಕೆ ಸರಿಯೇ? ಅಶೋಕ, ಎಚ್‌.ಡಿ.ಕೆ, ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:20 IST
Last Updated 8 ಸೆಪ್ಟೆಂಬರ್ 2025, 5:20 IST
<div class="paragraphs"><p>ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ಬೇಳೆ ಹಾಳಾಗಿ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡ ರೈತರ ಮೇಲೆ ದಬ್ಬಾಳಿಕೆ ಮಾಡಿದ್ದು ಸರಿಯೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಆಶೋಕ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿರುವ ಅಶೋಕ, 'ಅಧಿಕಾರದ ಮದದಿಂದ ಕಾಂಗ್ರೆಸ್ ನಾಯಕರು ರೈತರ ಮೇಲೆ ದಬ್ಬಾಳಿಕೆ ಮಾಡಿರುವುದು, ಅಪಮಾನ ಮಾಡಿರುವುದು ಇದೇನು ಮೊದಲಲ್ಲ. ಈಗ ಆ ಪಟ್ಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸೇರಿರುವುದು ದುರಂತವೇ ಸರಿ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

'ತೊಗರಿ ಬೇಳೆ ಹಾಳಾಗಿ ನಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳಲು ಬಂದ ನೊಂದ ರೈತರ ಬಳಿ ಈ ರೀತಿ ವ್ಯವಹರಿಸುವುದು ಸರೀಯೇ ಖರ್ಗೆ ಅವರೇ' ಎಂದು ಪ್ರಶ್ನಿಸಿದ್ದಾರೆ.

'ನಿನ್ನದು 4 ಎಕರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯಾ? ತೊಗರಿ ಅಷ್ಟೆ ಅಲ್ಲ, ಉದ್ದು, ಹೆಸರು ಕೂಡ ಹಾಳಾಗಿದ್ದು ನನಗೆ ಗೊತ್ತಿದೆ. 6 ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು' ಎಂದು ಗದರಿ ಕಳಿಸಿದ್ದೀರಲ್ಲ; ಇದೇನಾ ಕಾಂಗ್ರೆಸ್ ಪಕ್ಷ ರೈತರಿಗೆ ಕೊಡುವ ಗೌರವ?' ಎಂದು ಕೇಳಿದ್ದಾರೆ.

'ಸಿದ್ಧರಾಮಯ್ಯ ಅವರು ಮೊದಲ ಸಲ ಮುಖ್ಯಮಂತ್ರಿ ಆಗಿದ್ದಾಗ ಕಳಸಾ-ಬಂಡೂರಿ ಅನುಷ್ಠಾನ ಒತ್ತಾಯಿಸಿ ರೈತರು ಪ್ರತಿಭಟನೆ ಮಾಡಿದ್ದ ಸಂದರ್ಭದಲ್ಲಿ, ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿದ್ದನ್ನು ನಾಡಿನ ರೈತರು ಮರೆತಿಲ್ಲ. ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನ ನಾಡಿನ ರೈತರು ಮರೆತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ ಎಲ್ಲಿದೆ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕಾಗತ್ತಾ? ಸುಳ್ಳು ಅದೆಲ್ಲಾ. ರೈತರು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ರೈತರ ಬಗ್ಗೆ ತುಚ್ಛವಾಗಿ ಮಾತನಾಡಿದ್ದನ್ನು ಮರೆತಿಲ್ಲ' ಎಂದಿದ್ದಾರೆ.

ಹಾಗೆಯೇ, 'ರೈತ ವಿರೋಧಿ ಕಾಂಗ್ರೆಸ್‌ ಪಕ್ಷಕ್ಕೆ ನಾಡಿನ ಅನ್ನದಾತರ ಶಾಪ ತಟ್ಟದೇ ಇರದು' ಎಂದು ಎಚ್ಚರಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ವರ್ತನೆಯನ್ನು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರೂ ಟೀಕಿಸಿದ್ದಾರೆ.

‌‘ರೈತರ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಿದ್ದೇ ಹೆಚ್ಚು’ ವಿರೋಧ ಪಕ್ಷದ ನಾಯಕ ಬಿ.ಯೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.