
ಮೈಸೂರು: ‘ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಳಗಾವಿ ಜನಪ್ರತಿನಿಧಿಗಳು ಮತ್ತು ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮುಖ್ಯಮಂತ್ರಿ ಮಣಿದಿದ್ದಾರೆ. ತಮ್ಮ ತಪ್ಪಿಗೆ ಪ್ರಧಾನಿ ಅವರನ್ನು ಇಕ್ಕಟಿಗೆ ಸಿಲುಕಿಸುವ ರಾಜಕೀಯ ಮಾಡುತ್ತಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಯಾವ ರಾಜ್ಯದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ದಾರೆ’ ಎಂದು ಪ್ರಶ್ನಿಸಿದರು.
‘ನಾನೂ ಎರಡು ಬಾರಿ ಸಿ.ಎಂ ಆಗಿದ್ದಾಗಲೂ ಕೇಂದ್ರ ಸರ್ಕಾರದ ಕಡೆ ನೋಡದೇ ಸಮಸ್ಯೆ ಬಗೆಹರಿಸಿದ್ದೇನೆ. ಕೇಂದ್ರವು ಈಗಾಗಲೇ ಎಫ್ಆರ್ಪಿ ದರ ನಿಗದಿ ಮಾಡಿದೆ. ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಯೋಜನೆ ಉಸ್ತುವಾರಿಗಳಿಗೆ ಸಂಪುಟ ದರ್ಜೆ ಸ್ಥಾನ ನೀಡಿ ದುಂದುವೆಚ್ಚ ಮಾಡುವ ಬದಲು ಅದನ್ನು ರೈತರಿಗೆ ನೀಡಬಹುದಿತ್ತು. ಹಣದ ಕೊರತೆ ಇದ್ದರೆ ಅದನ್ನು ಹೇಳುವುದರ ಬದಲು ಕೇಂದ್ರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ’ ಎಂದರು.
‘ಬೆಳಗಾವಿಯಲ್ಲಿ ಜೆಡಿಎಸ್ನ ಯಾರೊಬ್ಬರು ಸಕ್ಕರೆ ಕಾರ್ಖಾನೆ ಹೊಂದಿಲ್ಲ. ಬಂಡೆಪ್ಪ ಕಾಶೆಂಪುರ ತಮ್ಮ ಕಾರ್ಖಾನೆ ಮಾರಾಟ ಮಾಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕ್ರಾಂತಿ, ವಾಂತಿ ಆಗಲ್ಲ:
‘ನಮ್ಮ ಪಕ್ಷದಲ್ಲಿದ್ದಾಗಲೇ ಸಿದ್ದರಾಮಯ್ಯ ಅವರ ಗುಣವೇನೆಂದು ಗೊತ್ತಿದೆ. ನವೆಂಬರ್ನಲ್ಲಿ ಯಾವ ಕ್ರಾಂತಿಯೂ ಆಗೊಲ್ಲ. ವಾಂತಿಯೂ ಆಗಲ್ಲ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಬಗ್ಗೆ ದೇವರೊಂದಿಗೆ ಯಾವಾಗಲೂ ಚರ್ಚಿಸುತ್ತಾರೆ. ದೇವರು ಅವರಿಗೆ ಏನು ಹೇಳಿದ್ದಾನೂ ನನಗೇನು ಗೊತ್ತು’ ಎಂದು ಕುಮಾರಸ್ವಾಮಿ ಹೇಳಿದರು.
‘ಗ್ರೇಟರ್ ಬೆಂಗಳೂರು– ಗ್ರೇಟರ್ ಮೈಸೂರು, ಸಿದ್ದರಾಮಯ್ಯ– ಡಿ.ಕೆ.ಶಿವಕುಮಾರ್ ಅವರ ನಡುವಿನ ಪೈಪೋಟಿಯಾಗಿದೆ. ಯಾವ ಗ್ರೇಟರ್ ಕೂಡಾ ಆಗುವುದಿಲ್ಲ. ಸುಮ್ಮನೆ ಕಾಲಹರಣವಷ್ಟೇ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.