ಬೆಂಗಳೂರು: ಬಿಜೆಪಿ ಆಡಳಿತವು ಜನಸಾಮಾನ್ಯರಿಗೆ ದುಬಾರಿ ದುನಿಯಾ ಆಗಿ ಪರಿಣಮಿಸಿದೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.
ಅಗತ್ಯವಸ್ತುಗಳ ಮೇಲೆ ತೆರಿಗೆ ವಿಧಿಸಿರುವುದರ ವಿರುದ್ಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
‘ಸಿರಿವಂತರಿಗೆ ಕಾರ್ಪೊರೇಟ್ ತೆರಿಗೆ ಶೇ 30ರಿಂದ ಶೇ 22ಕ್ಕೆ ಇಳಿಕೆ. ಜನಸಾಮಾನ್ಯರಿಗೆ ಆಹಾರ ಧಾನ್ಯಗಳ ಟ್ಯಾಕ್ಸ್ ಶೂನ್ಯದಿಂದ ಶೇ 5ರಷ್ಟು ಹೇರಿಕೆ. ಸಿರಿವಂತರ 6.17 ಟ್ರಿಲಿಯನ್ ಮೊತ್ತದ ಎನ್ಪಿಎ (ಅನುತ್ಪಾದಕ ಸಾಲ) ಮನ್ನಾ. ರೈತರ ಪಂಪ್ಸೆಟ್ ಮೇಲೆ ಶೇ 12ರಿಂದ 18ಕ್ಕೆ ತೆರಿಗೆ ಗುನ್ನಾ! ಬಿಜೆಪಿ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಳೆಯರದ್ದೇ ಪೂರಾ ದುನಿಯಾ, ಜನಸಾಮಾನ್ಯರಿಗೆ ದುಬಾರಿ ದುನಿಯಾ!’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಪ್ರಧಾನಿ ಮೋದಿಯವರು ತಮ್ಮ ‘ನಾ ಖಾನೆದುಂಗಾ’ ಮಾತನ್ನು ನಿಜ ಮಾಡಿದ್ದಾರೆ. ಅಕ್ಕಿ, ಬೇಳೆ, ಗ್ಯಾಸ್, ಹಾಲು, ಮೊಸರು ಬೆಲೆ ಏರಿಸುವ ಮೂಲಕ ಅವರ ‘ನಾ ಖಾನೆದುಂಗಾ’ ಮಾತನ್ನು ಸಾಕಾರಗೊಳಿಸಿದ್ದಾರೆ! ಹಾಗೆಯೇ 40% ಕಮಿಷನ್, ಪಿಎಸ್ಐ ಹಗರಣಗಳಂತಹ ಭ್ರಷ್ಟಾಚಾರಗಳಿಗೆ ಮೌನದ ಸಮ್ಮತಿ ಮೂಲಕ ‘ನಾ ಖಾನೆದುಂಗಾ’ ಮಾತನ್ನು ಸುಳ್ಳಾಗಿಸಿದ್ದಾರೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನೊಂದು ಟ್ವೀಟ್ನಲ್ಲಿ ಅಟಲ್ ಸಾರಿಗೆ ಕುರಿತ ವರದಿಯೊಂದನ್ನು ಉಲ್ಲೇಖಿಸಿ,ಹಿರಿಯರನ್ನು ಮರೆಯುವುದೇ ಬಿಜೆಪಿ ಸಂಸ್ಕೃತಿ ಎಂದು ಟೀಕಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.