ADVERTISEMENT

Karnataka Politics: ಉಪ ಸಭಾಪತಿ ಪ್ರಾಣೇಶ್‌ ಪದಚ್ಯುತಿಗೆ ಕಾರ್ಯತಂತ್ರ

ಪಕ್ಷೇತರ ಸದಸ್ಯ ಲಖನ್‌ ಜಾರಕಿಹೊಳಿ, ಸಭಾಪತಿ ವಿವೇಚನಾ ಮತಗಳತ್ತ ಕಾಂಗ್ರೆಸ್‌ ಚಿತ್ತ

ಚಂದ್ರಹಾಸ ಹಿರೇಮಳಲಿ
Published 26 ಫೆಬ್ರುವರಿ 2026, 23:31 IST
Last Updated 26 ಫೆಬ್ರುವರಿ 2026, 23:31 IST
ಎಂ.ಕೆ.ಪ್ರಾಣೇಶ್ 
ಎಂ.ಕೆ.ಪ್ರಾಣೇಶ್    

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಅವರನ್ನು ಪದಚ್ಯುತಿಗೊಳಿಸಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ. 

ಪ್ರಾಣೇಶ್‌ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿ ಐವನ್‌ ಡಿಸೋಜ ನೇತೃತ್ವದಲ್ಲಿ 10 ಸದಸ್ಯರು ಪರಿಷತ್‌ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಮಾರ್ಚ್‌ 6ರಿಂದ ಆರಂಭವಾಗುವ ಬಜೆಟ್‌ ಅಧಿವೇಶನದಲ್ಲೇ ನೂತನ ಉಪಸಭಾಪತಿ ಆಯ್ಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. 

ಬಸವರಾಜ ಹೊರಟ್ಟಿ ಅವರನ್ನು ಹೊರತುಪಡಿಸಿ ಬಿಜೆಪಿ 29 ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿ ಮೈತ್ರಿಕೂಟದ ಜೆಡಿಎಸ್‌ನ ಏಳು ಸದಸ್ಯರಿದ್ದಾರೆ. ಎರಡೂ ಪಕ್ಷಗಳು ಒಟ್ಟು ಬಲ 36 ರಷ್ಟಿದೆ. ಕಾಂಗ್ರೆಸ್‌ 37 ಸದಸ್ಯ ಬಲಹೊಂದಿದ್ದು ಮಿತ್ರ ಪಕ್ಷಗಳಿಗಿಂತ ಒಂದು ಸ್ಥಾನ ಹೆಚ್ಚು ಹೊಂದಿದೆ. ಒಬ್ಬರು ಪಕ್ಷೇತರ ಸದಸ್ಯ ಇದ್ದಾರೆ. 

ADVERTISEMENT

ಲಖನ್‌ರತ್ತ ಚಿತ್ತ:

ಬಿಜೆಪಿ–ಜೆಡಿಎಸ್‌ಗಿಂತ ಕಾಂಗ್ರೆಸ್‌ ಒಂದು ಸ್ಥಾನ ಹೆಚ್ಚು ಇರುವುದರಿಂದ ಪಕ್ಷೇತರ ಸದಸ್ಯ ಲಖನ್‌ ಜಾರಕಿಹೊಳಿ ಅವರತ್ತ ವಿರೋಧ ಪಕ್ಷಗಳ ಮೈತ್ರಿಕೂಟ ಚಿತ್ತ ನೆಟ್ಟಿವೆ. ಕಾಂಗ್ರೆಸ್‌ ಸಹ ಅವರನ್ನು ಸೆಳೆಯಲು ಮುಂದಾಗಿದೆ. ಒಂದು ವೇಳೆ ಲಖನ್‌ ಕಾಂಗ್ರೆಸ್‌ ಜತೆ ಕೈಜೋಡಿಸಿದರೆ ಪ್ರಾಣೇಶ್‌ ಅವರ ಪದಚ್ಯುತಿಯ ದಾರಿ ಸುಗಮವಾಗಲಿದೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ತಮ್ಮ. ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ವಿಧಾನಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಸತೀಶ ಅವರೇ ಬೆಳಗಾವಿಯಿಂದ ಲಖನ್ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿದ್ದರು. ಹಾಗಿದ್ದರೂ, ಲಖನ್ ಅವರು ಎರಡೂ ಪಕ್ಷಗಳಿಂದ ಅಂತರವನ್ನು ಕಾಯ್ದುಕೊಂಡೇ ಬಂದಿದ್ದಾರೆ. ಈಗ ಶುರುವಾಗಿರುವ ಉಪಸಭಾಪತಿ ಪದಚ್ಯುತಿಯ ಪ್ರಯತ್ನದಲ್ಲಿ ಅವರ ನಿರ್ಣಯವೇ ಪ್ರಮುಖ ಪಾತ್ರ ವಹಿಸಲಿದೆ. ಬಿಜೆಪಿ–ಜೆಡಿಎಸ್‌ ಜತೆ ಸೇರಿಕೊಂಡರೆ ಸಮಬಲವಾಗುತ್ತದೆ. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿವೇಚನಾ ಮತ ನಿರ್ಣಾಯಕ ಪಾತ್ರ ವಹಿಸಲಿದೆ.

ಪ್ರಾಣೇಶ್‌ ಪದಚ್ಯುತಿ ಮೇಲೆ ಹೊರಟ್ಟಿ ಭವಿಷ್ಯ: 

ಉಪ ಸಭಾಪತಿ ಪದಚ್ಯುತಿಗಾಗಿ ಕಾಂಗ್ರೆಸ್‌ ಮಂಡಿಸುವ ನಿರ್ಣಯದ ಪರ ಲಖನ್‌ ಮತ ಚಲಾಯಿಸುತ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡು ಕಾಂಗ್ರೆಸ್‌ ತನ್ನ ಚಟುವಟಿಕೆ ತೀವ್ರಗೊಳಿಸಿದೆ. ಒಂದು ವೇಳೆ ಲಖನ್‌ ಕೈಕೊಟ್ಟರೆ ಸಭಾಪತಿ ಅವರ ವಿವೇಚನಾ ಮತ ಆಸರೆಯಾಗಬಹುದು ಎನ್ನುವ ಲೆಕ್ಕಾಚಾರ ಇಟ್ಟುಕೊಂಡಿದೆ. ಅದಕ್ಕಾಗಿಯೇ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಪದಚ್ಯುತಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿಲ್ಲ.

‘ಒಂದು ವೇಳೆ ಸಭಾಪತಿ ಅವರ ವಿವೇಚನಾ ಮತವು ಪ್ರಾಣೇಶ್‌ ಅವರನ್ನು ಉಳಿಸಿದರೆ ಕೆಲ ತಿಂಗಳ ನಂತರ ಕಾಂಗ್ರೆಸ್‌ ಬಲ ಹೆಚ್ಚಾಗಲಿದ್ದು, ಆ ನಂತರವೇ ಸಭಾಪತಿ ಮತ್ತು ಉಪ ಸಭಾಪತಿ ಇಬ್ಬರ ವಿರುದ್ಧವೂ ಪದಚ್ಯುತಿ ನಿರ್ಣಯ ಮಂಡಿಸಲು ಪಕ್ಷದ ನಾಯಕರು ಸೂಚಿಸಿದ್ದಾರೆ. ಒಂದು ವೇಳೆ ಸಭಾಪತಿ ಸಹಕಾರ ದೊರೆತರೆ ಅವರನ್ನು ಮುಂದುವರಿಸಲು ಆಲೋಚಿಸಲಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.  

ಪ್ರಾಣೇಶ್ ಆಯ್ಕೆ ಪ್ರಶ್ನಿಸಿದ ಅರ್ಜಿ: ತೀರ್ಪು ಬಾಕಿ
ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಪರಿಷತ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಬಳಸಿಕೊಂಡು ಪ್ರಾಣೇಶ್‌ ಅವರು ಗೆಲುವು ಸಾಧಿಸಿದ್ದಾರೆ ಎಂದು ಕಾಂಗ್ರೆಸ್‌ನ ಎ.ವಿ.ಗಾಯತ್ರಿ ಶಾಂತೇಗೌಡ ಕೋರ್ಟ್‌ ಮೆಟ್ಟಿಲೇರಿದ್ದರು. ಮತ ಎಣಿಕೆ 2021ರ ಡಿಸೆಂಬರ್ 14ರಂದು ನಡೆದಿತ್ತು. ಬಿಜೆಪಿಯ ಪ್ರಾಣೇಶ್‌ 1188 ಮತಗಳನ್ನು ಗಾಯತ್ರಿ ಶಾಂತೇಗೌಡ ಅವರು 1182 ಮತಗಳನ್ನು ಗಳಿಸಿದ್ದರು. ಪ್ರಾಣೇಶ್‌ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ‘ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರಲಿಲ್ಲ’ ಎಂದು ಹೈಕೋರ್ಟ್‌ 2022ರಲ್ಲಿ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್‌ ಸಹ 12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಮರು ಮತ ಎಣಿಕೆಯ ವರದಿಯನ್ನು ಜಿಲ್ಲಾಧಿಕಾರಿ 2025ರ ಮಾರ್ಚ್‌ನಲ್ಲೇ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.