ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿಯ ವೇಳೆಯಲ್ಲೇ ಶುಕ್ರವಾರ ಇಡೀ ದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆಗಳ ಸುರಿಮಳೆಗರೆದ ಕೆಪಿಸಿಸಿ, ಕರ್ನಾಟಕದ ಜನರಿಗೆ ಬಿಜೆಪಿ ನೀಡಿದ್ದ ಭರವಸೆಗಳು, ಸರಕು ಮತ್ತು ಸೇವಾ ತೆರಿಗೆಯ ಪಾಲು ಬಿಡುಗಡೆ, ರಾಜ್ಯ ಸರ್ಕಾರದ ವಿರುದ್ಧದ ಶೇಕಡ 40ರ ಕಮಿಷನ್ ಆರೋಪ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತು.
‘ModiMosa’ ಮತ್ತು ‘ನಿಮ್ಮ ಹತ್ತಿರ ಉತ್ತರ ಇದೆಯಾ’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕೆಪಿಸಿಸಿ ಅಧಿಕೃತ ಖಾತೆಯಿಂದ ಇಡೀ ದಿನ ಅಭಿಯಾನ ನಡೆಯಿತು. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪ್ರಣಾಳಿಕೆಗಳಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನದ ಕುರಿತು ಕಾಂಗ್ರೆಸ್ ಪ್ರಶ್ನಿಸಿತು.
‘ಕರ್ನಾಟಕದಲ್ಲಿ ಎರಡು ಬಾರಿ ಪ್ರವಾಹ ಬಂದರೂ ಪ್ರಧಾನಿ ತಿರುಗಿ ನೋಡಲಿಲ್ಲ. ರಾಜ್ಯಕ್ಕೆ ಬರಬೇಕಿದ್ದ ಜಿಎಸ್ಟಿ ಪಾಲು ನೀಡಲಿಲ್ಲ. ರಾಜ್ಯದ ಬಿಜೆಪಿ ಸರ್ಕಾರ ಕಮಿಷನ್ ದಂಧೆಯಲ್ಲಿ ತೊಡಗಿರುವಾಗಲೂ ಧ್ವನಿ ಎತ್ತಲಿಲ್ಲ. ಎಂಟು ವರ್ಷಗಳಿಂದ ಮೋದಿಯವರು ರಾಜ್ಯದ ಜನರಿಗೆ ನೀಡಿದ ಎಲ್ಲ ಭರವಸೆಗಳೂ ಹಾಗೆಯೇ ಉಳಿದಿವೆ. ಈಗ ಚುನಾವಣೆ ನೆನಪಾಗಿ ಮತ್ತೆ ಬಂದಿದ್ದಾರೆ’ ಎಂದು ಕಾಂಗ್ರೆಸ್ ಟೀಕಿಸಿತು.
‘ಮತ್ತೆ ಅದೇ ಹಳೆಯ ಕ್ಯಾಸೆಟ್, ಸುಳ್ಳು ಅಂಕಿಅಂಶಗಳು, ಆತ್ಮವಂಚನೆಯ ಮಾತುಗಳು. ಪ್ರಧಾನಿಯವರೇ ಶೇಕಡ 40ರಷ್ಟು ಕಮಿಷನ್ ಲೂಟಿಯ ಬಗ್ಗೆ ಮಾತನಾಡದಿರುವುದು ಆತ್ಮವಂಚನೆ ಅಲ್ಲವೆ’ ಎಂದು ಕೆಪಿಸಿಸಿ ಕೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.