ADVERTISEMENT

ಸಿ.ಎಂ ಮನೆ ಎದುರೇ ಕ್ವಾರಂಟೈನ್ ವ್ಯಕ್ತಿ

ಪೊಲೀಸರಿಗೆ ತಲೆನೋವಾದ ವಿದೇಶದಿಂದ ಬಂದವರು l ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 20:00 IST
Last Updated 24 ಮಾರ್ಚ್ 2020, 20:00 IST
ಯುವತಿಯನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ
ಯುವತಿಯನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ   

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ಸಂಬಂಧ ವಿದೇಶದಿಂದ ಬಂದವರ ಕೈಗೆ ಮುದ್ರೆಯನ್ನು ಹಾಕಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದ್ದು, ಅಷ್ಟಾದರೂ ಕೆಲವರು ಮನೆಯಿಂದ ಹೊರಗೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಇವರೆಲ್ಲ ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡುತ್ತಿದ್ದು, ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದ್ದಾರೆ.

‘ಬಸವೇಶ್ವರನಗರದ 70 ವರ್ಷದ ವೈದ್ಯರೊಬ್ಬರು ಲಂಡನ್‌ನಿಂದ ಇವೇ 19ರಂದು ನಗರಕ್ಕೆ ಬಂದಿದ್ದರು. ಕ್ವಾರಂಟೈನ್‌ನಲ್ಲಿರುವಂತೆ ಅವರಿಗೆ ಸೂಚಿಸಲಾಗಿತ್ತು. ಅಷ್ಟಾದರೂ ಅವರು ಬೆಳಿಗ್ಗೆ 6.30ರ ಸುಮಾರಿಗೆ ಕುವೆಂಪು ಕ್ರೀಡಾಂಗಣದಲ್ಲಿ ವಾಯುವಿಹಾರಕ್ಕೆ ತೆರಳಿದ್ದರು’ ಎಂದು ಪೊಲೀಸರು ಹೇಳಿದರು.

‘ಕೈಯಲ್ಲಿ ಮುದ್ರೆ ಇದ್ದ ವೈದ್ಯರನ್ನು ನೋಡಿ ಆತಂಕಗೊಂಡ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದ್ದರು. ವಿಶೇಷ ತಂಡ ಉದ್ಯಾನಕ್ಕೆ ಹೋಗಿ ವೈದ್ಯನಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದೆ. ಕ್ವಾರಂಟೈನ್ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ADVERTISEMENT

ಶಾಪಿಂಗ್ ಮಹಿಳೆ ಮೇಲೆ ಎಫ್ಐಆರ್: ವಿದೇಶದಿಂದ ಬಂದಿದ್ದ ಹಾಗೂ ಕೈ ಮೇಲೆ ಮುದ್ರೆ ಹಾಕಲಾಗಿದ್ದ ಮಹಿಳೆ ಇತ್ತೀಚೆಗಷ್ಟೇ ಮಳಿಗೆಯೊಂದಕ್ಕೆ ಹೋಗಿ ಶಾಪಿಂಗ್ ಮಾಡಿದ್ದರು. ಸಾರ್ವಜನಿಕರು ಫೋಟೊ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಿಳೆ

ವಿರುದ್ಧ ಇದೀಗವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ದುಬೈನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ ಕೈಯಲ್ಲಿ ಹೋಂ ಕ್ವಾರಂಟೈನ್ ಮುದ್ರೆ ಇತ್ತು. ಅಷ್ಟಾದರೂ ಅವರು ಮನೆಯಲ್ಲಿ ಇರದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದರು’ ಎಂದು ಪೊಲೀಸರು ಹೇಳಿದರು.

ಸಿ.ಎಂ ಮನೆ ಬಳಿಯೂ ಪ್ರತ್ಯಕ್ಷ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಬಳಿಯೂ ವ್ಯಕ್ತಿಯೊಬ್ಬ ಕಾಣಿಸಿದ್ದ. ಐವರ ಜೊತೆಯಲ್ಲಿ ಕಾರಿನಲ್ಲಿ ಬಂದಿದ್ದ ಆತನ ಕೈಯಲ್ಲಿ ಮುದ್ರೆ ಇತ್ತು. ಅದನ್ನು ನೋಡಿದ್ದ ಭದ್ರತಾ ಸಿಬ್ಬಂದಿ, ಆತನನ್ನು ಮನೆಗೆ ಹೋಗುವಂತೆ ಎಚ್ಚರಿಕೆ ನೀಡಿ ಕಳುಹಿಸಿದರು. ಆತ ಪಶ್ಚಿಮ‌ ಬಂಗಾಳದ ವ್ಯಕ್ತಿ. ವಿಮಾನ ನಿಲ್ದಾಣಕ್ಕೆ ಹೊರಟಿದ್ದ. ಆತನ ಸಂಪೂರ್ಣ ವಿವರ ಪಡೆದುಕೊಂಡು ಕಳುಹಿಸಲಾಗಿದೆ’ ಎಂದು ಭದ್ರತಾ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.