ADVERTISEMENT

ಮಾಗಡಿ ಚಾಲಕನ ಜತೆ ಪ್ರಯಾಣಿಸಿದ ಎಲ್ಲರಿಗೂ ಕೋವಿಡ್‌ ಪರೀಕ್ಷೆ: ಶ್ರೀರಾಮುಲು

ಕೆಂಪು ವಲಯದಿಂದ ಕೆಲಸಕ್ಕೆ ಬರುವ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 8:44 IST
Last Updated 26 ಮೇ 2020, 8:44 IST
ಸಚಿವ ಬಿ.ಶ್ರೀರಾಮುಲು
ಸಚಿವ ಬಿ.ಶ್ರೀರಾಮುಲು   

ಬೆಂಗಳೂರು: ಮಾಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ಅವರ ಜತೆ ಪ್ರಯಾಣಿಸಿದವರು ಮತ್ತು ಕುಟುಂಬದ ಸದಸ್ಯರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಾಲಕನ ಸಂಪರ್ಕಕ್ಕೆ ಬಂದ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಇನ್ನು ಮುಂದೆ ಕೆಂಪು ವಲಯ ಮತ್ತು ಕಂಟೈನ್ಮೆಂಟ್‌ ವಲಯಗಳಿಂದ ಬಂದು ಕೆಲಸ ಮಾಡುತ್ತಿರುವರನ್ನೂ ಮತ್ತು ಅವರ ಜತೆ ಸಂಪರ್ಕದಲ್ಲಿ ಇರುವವರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಆತಂಕಪಡುವ ಅಗತ್ಯವಿಲ್ಲ ಎಂದು ರಾಮುಲು ಭರವಸೆ ನೀಡಿದರು.

ADVERTISEMENT

ಆಯುಷ್‌ ವೈದ್ಯರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ಅವರ ಬೇಡಿಕೆಗಳಿಗೆ ಕುರಿತು ಚರ್ಚಿಸುತ್ತೇನೆ. ಹಲವು ವರ್ಷಗಳಿಂದ ಅವರ ಬೇಡಿಕೆಗಳು ಈಡೇರಿಲ್ಲ. ಎಂಬಿಬಿಎಸ್‌ ವೈದ್ಯರಿಗೆ ಸಮನಾಗಿ ವೇತನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದರು.

ಇವರ ಬೇಡಿಕೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿಕೊಡುವ ಸಂಬಂಧ ಒಂದು ಸಮಿತಿಯನ್ನು ರಚಿಸುತ್ತೇವೆ. ವರದಿ ಸಿಕ್ಕಿದ ಬಳಿಕ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಅಯುಷ್‌ ವೈದ್ಯ ಪದ್ಧತಿಗೆ ಒತ್ತು ಕೊಡುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ಅದಕ್ಕೆ ಆದ್ಯತೆ ನೀಡಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.