ಕಾರವಾರ: ಕೊರೊನಾ ಸೋಂಕು ವಿರುದ್ಧ ಹೋರಾಡುತ್ತಿರುವ ‘ಸೈನಿಕ’ರಿಗೆ ಭಾರತೀಯ ನೌಕಾಪಡೆ ವಿಶಿಷ್ಟ ರೀತಿ ಗೌರವ ಸಲ್ಲಿಸಿದೆ. ‘ಹರ್ ಕಾಮ್ ದೇಶ್ ಕೇ ನಾಮ್’ ಘೋಷಣೆಯಡಿ ಶನಿವಾರ ಮತ್ತು ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಇಲ್ಲಿನ ಸೀಬರ್ಡ್ನೌಕಾನೆಲೆಯ ಯುದ್ಧನೌಕೆಗಳಲ್ಲಿರಾತ್ರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಬೆಳಗಿದವು. ದೇಶದ ಅತಿದೊಡ್ಡ ಯುದ್ಧ ವಿಮಾನ ವಾಹಕ ನೌಕೆ ‘ಐ.ಎನ್.ಎಸ್ ವಿಕ್ರಮಾದಿತ್ಯ‘ದಲ್ಲಿ ಸಿಬ್ಬಂದಿ, ‘ಇಂಡಿಯನ್ ನೇವಿ ಸೆಲ್ಯೂಟ್ಸ್ ಕೊರೊನಾ ವಾರಿಯರ್ಸ್’ (ಭಾರತೀಯ ನೌಕಾಪಡೆಯು ಕೊರೊನಾ ಸೈನಿಕರಿಗೆ ನಮಸ್ಕರಿಸುತ್ತದೆ) ಎಂದು ಆಂಗ್ಲಭಾಷೆಯ ವಾಕ್ಯದ ಮಾದರಿಯಲ್ಲಿ ನಿಂತಿದ್ದರು. ಲೇಸರ್ ಶೋ ಮೂಲಕವೂ ಜಾಗೃತಿ ಮೂಡಿಸಲಾಯಿತು.
ಇದೇ ರೀತಿ, ನೌಕಾನೆಲೆಗಳ ಪ್ರಮುಖ ರಸ್ತೆಗಳಲ್ಲಿ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದರು. ವಿಶೇಷ ಪಥ ಸಂಚಲನವು ನಡೆಯಿತು. ಸಿಡಿಮದ್ದು ಸಿಡಿಸಲಾಯಿತು ಎಂದು ನೌಕಾಪಡೆ ವಕ್ತಾರ ಅಜಯ್ ಕಪೂರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಶಸ್ತ್ರ ಪಡೆಗಳ ಆಸ್ಪತ್ರೆಗಳ ಪೈಕಿ ದೇಶದಲ್ಲೇ ಮೊದಲ ಬಾರಿಗೆ ಕಾರವಾರ ನೌಕಾನೆಲೆಯ ಐ.ಎನ್.ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರ ಚಿಕಿತ್ಸೆಗೆ ಅವಕಾಶ ಒದಗಿಸಲಾಗಿತ್ತು. ಜಿಲ್ಲೆಯ 11 ಸೋಂಕಿತರಲ್ಲಿ ಒಂಬತ್ತು ಮಂದಿ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.