ADVERTISEMENT

ನೂರರ ಗಡಿ ಸಮೀಪಿಸಿದ ಕೊರೊನಾ

ಒಂದೇ ದಿನ 19 ಜನರಲ್ಲಿ ಕೋವಿಡ್–19 ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 23:50 IST
Last Updated 17 ಜೂನ್ 2020, 23:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ಒಂದೇ ದಿನ 19 ಜನರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ ನೂರರ ಗಡಿಗೆ ಸಮೀಪಿಸಿದೆ.

ಅಂತರರಾಜ್ಯ, ಜಿಲ್ಲೆ ಹಾಗೂ ಸೋಂಕಿತ ವ್ಯಕ್ತಿಯ ಸಂಬಂಧಿಗಳಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಮೂರು ತಿಂಗಳಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದಕ್ಕೆ ಶುಕ್ರವಾರ ಸಾಕ್ಷಿಯಾಯಿತು.

ಬುಧವಾರ ಸೋಂಕು ದೃಢಪಟ್ಟ ಯಾಲಕ್ಕಿ ಶೆಟ್ಟರ್ ಕಾಲೊನಿ ನಿವಾಸಿ 29 ವರ್ಷದ ಶಿಕ್ಷಕಿ (ಪಿ–5970)ಯ 34 ವರ್ಷದ ಪತಿ(ಪಿ–6260)ಗೆ ಸೋಂಕು ತಗುಲಿದೆ.ಹುಬ್ಬಳ್ಳಿ ಭೈರಿದೇವರಕೊಪ್ಪದಲ್ಲಿರುವ ಸನಾ ಕಾಲೇಜು ಹಿಂಭಾಗದ ಶಾಂತಿನಿಕೇತನ ಕಾಲೊನಿಯ ನಿವಾಸಿ 31 ವರ್ಷದ ಮಹಿಳೆ(ಪಿ–5969)ಯ 6 ತಿಂಗಳ ಗಂಡು ಮಗು(ಪಿ–6261)ವಿನಲ್ಲೂ ಸೋಂಕು ದೃಢಪಟ್ಟಿದೆ.

ADVERTISEMENT

ತೀವ್ರ ಉಸಿರಾಟ ತೊಂದರೆ ಹಾಗೂ ಕೋವಿಡ್–19 ಸೋಂಕಿನ ಲಕ್ಷಣ ಹೊಂದಿದ್ದ ಹಾವೇರಿಯ 72 ವರ್ಷದ ಮಹಿಳೆ (ಪಿ–6252), ಹುಬ್ಬಳ್ಳಿ ಕೃಷಿ ಕಾರ್ಮಿಕನಗರ ನಿವಾಸಿ 40 ವರ್ಷದ ಪುರುಷ (ಪಿ–6254), ಉಣಕಲ್‌ ಸಾಯಿನಗರ ನಿವಾಸಿ 49 ವರ್ಷದ ಪುರುಷ (ಪಿ–6255), 63 ವರ್ಷದ ಪುರುಷ (ಪಿ–6256), ಉಣಕಲ್ ನಿವಾಸಿ 71 ವರ್ಷದ ಮಹಿಳೆ(ಪಿ-6257)ಯಲ್ಲಿ ಸೋಂಕು ಇರುವುದನ್ನು ಪ್ರಯೋಗಾಲಯದ ವರದಿ ದೃಢಪಡಿಸಿದೆ.

ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿರುವವರಲ್ಲಿ ಚಿತ್ರದುರ್ಗದಿಂದ ಬಂದ ಹುಬ್ಬಳ್ಳಿ ನವನಗರ ನಿವಾಸಿ 37 ವರ್ಷದ ಪುರುಷ (ಪಿ–6253), ಕೋಲಾರ ಹಾಗೂ ಬೆಂಗಳೂರು ಪ್ರಯಾಣ ಹಿನ್ನೆಲೆಯ ಹುಬ್ಬಳ್ಳಿಯ ಗಣೇಶಪೇಟೆಯ ಕರ್ವೇ ಪ್ಲಾಜಾ ನಿವಾಸಿ 50 ವರ್ಷದ ಪುರುಷ (ಪಿ–6262), ತುಮಕೂರಿನಿಂದ ಬಂದ 75 ವರ್ಷದ ಮಹಿಳೆ (ಪಿ–6267)ಯಲ್ಲಿ ಸೊಂಕು ಪತ್ತೆಯಾಗಿದೆ.

ಹಾಗೆಯೇ ಅಂತರ ರಾಜ್ಯ ಪ್ರಯಾಣ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬಂದ 34 ವರ್ಷದ ಮಹಿಳೆ (ಪಿ–6251), 70 ವರ್ಷದ ಪುರುಷ (ಪಿ–6258), 62 ವರ್ಷದ ಮಹಿಳೆ (ಪಿ–6259), ಹುಬ್ಬಳ್ಳಿ ರವಿನಗರ ನಿವಾಸಿಗಳಾದ 33 ವರ್ಷದ ಮಹಿಳೆ (ಪಿ–6264) ಹಾಗೂ 12 ವರ್ಷದ ಬಾಲಕಿ (ಪಿ–6265), 33 ವರ್ಷದ ಪುರುಷ (ಪಿ–6266) ಇವರಲ್ಲಿ ಸೋಂಕು ದೃಢಪಟ್ಟಿದೆ. ಇವರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು.

ತಮಿಳುನಾಡು ಪ್ರಯಾಣ ಹಿನ್ನೆಲೆಯಹುಬ್ಬಳ್ಳಿಯ ಗಣೇಶಪೇಟೆಯ ಕರ್ವೇ ಪ್ಲಾಜಾ ನಿವಾಸಿ 46 ವರ್ಷದ ಪುರುಷ (ಪಿ–6263), ಗುಜರಾತ್‌ನಿಂದ ಹಿಂದಿರುಗಿದ 35 ವರ್ಷದ ಪುರುಷ (ಪಿ–6268), ಗೋವಾದಿಂದ ಮರಳಿದ ಹುಬ್ಬಳ್ಳಿ ಆನಂದ ನಗರದ 28 ವರ್ಷದ ಪುರುಷ (ಪಿ–6269) ಇವರಲ್ಲೂ ಸೋಂಕು ಕಂಡುಬಂದಿದೆ. ಇವರೆಲ್ಲರೂ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದರು.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91ಕ್ಕೆ ತಲುಪಿದೆ. ಸೋಂಕಿತರೆಲ್ಲರೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ 46 ಜನಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.