ADVERTISEMENT

ಮುಖ್ಯ ಕಾರ್ಯದರ್ಶಿ ಜೊತೆ ಬಿಎಸ್‌ವೈ ಚರ್ಚೆ: ಲಾಕ್‌ಡೌನ್‌ 5.0 ಪಾಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 31 ಮೇ 2020, 12:20 IST
Last Updated 31 ಮೇ 2020, 12:20 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಲಾಕ್‌ಡೌನ್‌ 5.0 ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಶನಿವಾರ ಹೊರಡಿಸಿದ್ದ ಮಾರ್ಗಸೂಚಿಯಂತೆ ನಿರ್ಬಂಧಗಳನ್ನು ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜೊತೆ ಭಾನುವಾರ ಚರ್ಚೆ ನಡೆಸಿದ ಬಳಿಕ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಅದರ ಅನ್ವಯ, ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಜೂನ್ 30ರವರೆಗೂ ನಿರ್ಬಂಧ ಇರಲಿದೆ. ಜೂನ್‌ 8ರ ನಂತರವೇ ಧಾರ್ಮಿಕ ಕ್ಷೇತ್ರ ಹಾಗೂ ಪೂಜಾ ಸ್ಥಳಗಳು, ಹೋಟೆಲ್‌, ಮಾಲ್‌ಗಳು ತೆರೆಯಲಿವೆ. ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ. (ಈಗ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಇದೆ)

ADVERTISEMENT

ಕಂಟೈನ್‌ಮೆಂಟ್‌ ಅಲ್ಲದ ಪ್ರದೇಶಗಳಲ್ಲಿ ಮೂರು ಹಂತಗಳಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶ ನೀಡಲಾಗಿದ್ದು, ಅದೇ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.

ಮೊದಲ ಹಂತದಲ್ಲಿ ಕಂಟೈನ್‌ಮೆಂಟ್‌ ಅಲ್ಲದ ಪ್ರದೇಶಗಳಲ್ಲಿ ಜೂನ್‌ 8ರ ಬಳಿಕ ಹೆಚ್ಚಿನ ಸಡಿಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಧಾರ್ಮಿಕ ಕ್ಷೇತ್ರಗಳು, ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ತೆರೆಯಲು ಅನುಮತಿ ಸಿಗಲಿದೆ. ಅಲ್ಲದೆ, ಹೋಟೆಲ್‌, ರೆಸ್ಟೋರೆಂಟ್‌ಗಳು, ಶಾಪಿಂಗ್‌ ಮಾಲ್‌ಗಳನ್ನೂ ತೆರೆಯಬಹುದು.

ಎರಡನೇ ಹಂತದಲ್ಲಿ ಶಾಲಾ, ಕಾಲೇಜುಗಳು, ಕೋಚಿಂಗ್‌ ಸೆಂಟರ್‌ಗಳು ಸೇರಿದಂತೆ ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ತೀರ್ಮಾನಿಸುವ ಮೊದಲು ಈ ಸಂಸ್ಥೆಗಳ ಮಟ್ಟದಲ್ಲಿ ಮತ್ತು ಪೋಷಕರು ಹಾಗೂ ಇತರ ಭಾಗೀದಾರರ ಜೊತೆ ಚರ್ಚಿಸಬೇಕು. ಎಲ್ಲರ ಅಭಿಪ್ರಾಯ ಪಡೆದ ಬಳಿಕ ಜುಲೈ ತಿಂಗಳಲ್ಲಿ ತೆರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು.

ಮೂರನೇ ಹಂತದಲ್ಲಿ, ಪರಿಸ್ಥಿತಿಯನ್ನು ಅವಲೋಕಿಸಿ, ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ ಬಳಿಕ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸಬಹುದು. ಅದೇ ರೀತಿ ಮೆಟ್ರೊ ರೈಲು, ಸಿನಿಮಾ ಮಂದಿರಗಳು, ಜಿಮ್‌, ಈಜುಕೊಳ, ಮನರಂಜನೆ ಪಾರ್ಕ್‌ಗಳು, ಆಡಿಟೋರಿಯಂಗಳನ್ನು ತೆರೆಯಬಹುದು. ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಹೆಚ್ಚು ಜನಸಂದಣಿಯ ಕಾರ್ಯಕ್ರಮಗಳನ್ನು ಆರಂಭಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.