ADVERTISEMENT

ಬೀದರ್‌: ದುಬೈಯಿಂದ ಬಂದ 60 ಮಂದಿ ತೆಲಂಗಾಣ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:46 IST
Last Updated 24 ಮಾರ್ಚ್ 2020, 10:46 IST
ನಿಷೇಧಾಜ್ಞೆ ಹಿನ್ನೆಲೆ ಬೀದರ್‌ ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ತಡೆದರು.
ನಿಷೇಧಾಜ್ಞೆ ಹಿನ್ನೆಲೆ ಬೀದರ್‌ ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ತಡೆದರು.   

ಬೀದರ್‌: ದುಬೈನಿಂದ ಮುಂಬೈಗೆ ಬಂದು ಅಲ್ಲಿಂದ ಖಾಸಗಿ ಬಸ್‌ನಲ್ಲಿ ಕರ್ನಾಟಕ ಮಾರ್ಗವಾಗಿ ತೆಲಂಗಾಣಕ್ಕೆ ಹೊರಟ್ಟಿದ 60 ಜನರನ್ನು ಔರಾದ್‌ ಪೊಲೀಸರು ತಡೆದು ತೆಲಂಗಾಣ ಪೊಲೀಸರಿಗೆ ಒಪ್ಪಿಸಿದ್ದಾರೆ.

ಖಾಸಗಿ ವಾಹನ ಔರಾದ್‌ ತಾಲ್ಲೂಕಿನ ಜಮಗಿ ಗ್ರಾಮದ ಬಳಿ ಬಂದಾಗ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಬಸ್‌ನಲ್ಲಿರುವ ಪ್ರಯಾಣಿಕರ ತಪಾಸಣೆ ನಡೆಸಿದಾಗ ಎಲ್ಲ 60 ಜನರ ಕೈಗಳ ಮೇಲೆ ಶಾಹಿಗುರುತು ಹಾಕಿರುವುದು ಕಂಡು ಬಂದಿತು.

ಔರಾದ್‌ ಪೊಲೀಸರು ಮೇದಕ್‌ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅಲ್ಲಿಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಬಸ್‌ ಅನ್ನು ವಶಕ್ಕೆ ತೆಗೆದುಕೊಂಡರು.

ADVERTISEMENT

ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ತೆಲಂಗಾಣದನಿಜಾಮಾಬಾದ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಇಡಲಾಗಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ನಂತರ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಮಲನಗರ, ಭಾಲ್ಕಿ, ಬಸವಕಲ್ಯಾಣ ಹಾಗೂ ತೆಲಂಗಾಣಕ್ಕೆ ಹೊಂದಿಕೊಂಡಿರುವ ಔರಾದ್, ಬೀದರ್‌ ತಾಲ್ಲೂಕಿನ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಹೈದರಾಬಾದ್‌ನ ರೈಲುಗಾಡಿಗಳು ಬೀದರ್‌ನಲ್ಲಿ ನಿಲುಗಡೆ: ದೇಶದೆಲ್ಲಡೆ ರೈಲು ಸಂಚಾರ ಸ್ಥಗಿತಗೊಳಿಸುವ ಕಾರಣ ಹೈದರಾಬಾದ್ ಹಾಗೂ ಸಿಕಂದರಾಬಾದ್‌ನಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಬೀದರ್‌ ರೈಲು ನಿಲ್ದಾಣ ಹಾಗೂ ಭಾಲ್ಕಿ ತಾಲ್ಲೂಕಿನ ಖಾನಾಪುರ ಜಂಕ್ಷನ್‌ಲ್ಲಿ ಒಟ್ಟು ನಾಲ್ಕು ರೈಲುಗಳನ್ನು ನಿಲುಗಡೆ ಮಾಡಲಾಗಿದೆ.

ಲಾಠಿ ರುಚಿ ತೋರಿಸಿದ ಪೊಲೀಸರು:ಜಿಲ್ಲೆಯಲ್ಲಿ ಮಾರ್ಚ್ 31ರ ವರೆಗೆ ಕಠಿಣ ನಿರ್ಬಂಧ ಹೇರಿದರೂ ಬೀದರ್‌ನಲ್ಲಿ ಬೆಳಿಗ್ಗೆ ದ್ವಿಚಕ್ರವಾಹನ ಮೇಲೆ ಓಡಾಡಲು ಆರಂಭಿಸಿದ ಕೆಲ ಯುವಕರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದರು. ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಹೊರಟಿದ್ದವರಿಗೆ ಅನುವು ಮಾಡಿಕೊಟ್ಟರು.

ಕೇಂದ್ರ ಬಸ್‌ ನಿಲ್ದಾಣ, ಓಲ್ಡ್‌ಸಿಟಿ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ನೌಬಾದ್‌ನಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.