ADVERTISEMENT

ಚಿಕ್ಕಬಳ್ಳಾಪುರ: 7 ಜನರಲ್ಲಿ ಕೋವಿಡ್ ಲಕ್ಷಣ ಗೋಚರ

ಮೊದಲ ಮೂರು ಪ್ರಕರಣಗಳ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಆರೋಗ್ಯದ ಮೇಲೆ ತೀವ್ರ ನಿಗಾ 

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 19:30 IST
Last Updated 27 ಮಾರ್ಚ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಮಾರಣಾಂತಿಕ ಕೋವಿಡ್ ಸೋಂಕಿಗೆ ಗೌರಿಬಿದನೂರಿನ ಒಬ್ಬ ವೃದ್ಧೆ ಬಲಿಯಾಗಿ, ಮೂರು ಜನರು ಜೀವನ್ಮರಣದ ಹೋರಾಟ ನಡೆಸಿರುವಾಗಲೇ, ಸೋಂಕಿತರ ಸಂಪರ್ಕಕ್ಕೆ ಬಂದವರ ಪೈಕಿ ಏಳು ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಇದು ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದೆ.

ಕಳೆದ ಫೆಬ್ರುವರಿಯಲ್ಲಿ ಮೆಕ್ಕಾ ಯಾತ್ರೆ ನಡೆಸಿ ಮಾರ್ಚ್ ಎರಡನೇ ವಾರದಲ್ಲಿ ವಾಪಾಸಾಗಿದ್ದ ಗೌರಿಬಿದನೂರು ನಗರದ ನಾಲ್ಕು ಯಾತ್ರಿಕರಿಗೆ ಕೋವಿಡ್ ತಗಲಿರುವುದು ಮಾರ್ಚ್ 21, 23, 24 ಮತ್ತು 26 ರಂದು ದೃಢಪಟ್ಟಿತ್ತು.

ಈ ಪೈಕಿ ಗೌರಿಬಿದನೂರಿನಲ್ಲಿ ಮಗನ ಮನೆಯಲ್ಲಿ ಗೃಹ ಬಂಧನದಲ್ಲಿದ್ದ ನೆರೆಯ ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕಿಗೆ ಸೇರಿದ ಮಹಿಳೆ ಮಾರ್ಚ್ 25 ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ADVERTISEMENT

ಮೊದಲು ದೃಢಪಟ್ಟ ಮೂರು ಪ್ರಕರಣಗಳ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಜನರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಗೃಹ ಬಂಧನಕ್ಕೆ ಒಳಪಡಿಸಿ, ಅವರ ಗಂಟಲ ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಶುಕ್ರವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ಏಳು ಜನರಲ್ಲಿ ಕೋವಿಡ್ 19 ಲಕ್ಷಣಗಳು ಇರುವುದು (ಪಾಸಿಟಿವ್) ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಅದರ ಬೆನ್ನಲ್ಲೇ ಗೌರಿಬಿದನೂರಿನಲ್ಲಿ ಗೃಹ ಬಂಧನದಲ್ಲಿ ಇದ್ದವರ ಪೈಕಿ‌ ಶಂಕಿತ ಏಳು ಜನರನ್ನು ಶುಕ್ರವಾರ ರಾತ್ರಿ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಸಜ್ಜುಗೊಳಿಸಿದ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಿ,‌‌ ನಿಗಾ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.