ಮಂಗಳೂರು: ಕೋವಿಡ್–19 ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಿರುವ ‘ಲಾಕ್ ಡೌನ್’ ಪ್ರಯುಕ್ತ ಜಾರಿಗೊಳಿಸಿರುವ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಏಳು ಜನರನ್ನು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಂಗಳೂರು ಕೇಂದ್ರ ಉಪ ವಿಭಾಗದಲ್ಲಿ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಮಗ್ಗೆ ಸಮೀಪದ ದಿನ್ನೆಕೊಪ್ಪಲು ನಿವಾಸಿ ಜೇಮ್ಸ್, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಚೆನ್ನಾಪುರ ನಿವಾಸಿ ವಿಮೇಶ, ಕುದ್ರೋಳಿಯಲ್ಲಿ ನೆಲೆಸಿರುವ ಉತ್ತರ ಪ್ರದೇಶದ ಅಮೀರ ಹಾಜು ಅನ್ಸಾರಿ, ರಾಜಸ್ತಾನದ ಬಲರಾಂ ಚೌಧರಿ, ಬಂದರು ನಿವಾಸಿಯಾಗಿರುವ ಅಸ್ಸಾಂನ ರಾಹುಲ್ ಪಾಂಡಯ್ ಎಂಬುವರನ್ನು ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ ಉಳ್ಳಾಲ ನಿವಾಸಿ ಸಿದ್ದಿಕ್ ಮತ್ತು ತೊಕ್ಕೊಟ್ಟು ನಿವಾಸಿ ವಿನಯ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
‘ಮಂಗಳೂರು ನಗರದ ಸಂಪೂರ್ಣವಾಗಿ ‘ಲಾಕ್ ಡೌನ್’ನಲ್ಲಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸಲಾಗುವುದು. ಜನರು ಮನೆಯಲ್ಲೇ ಉಳಿದು ಸಹಕಾರ ನೀಡಬೇಕು’ ಎಂದು ಕಮಿಷನರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.