ADVERTISEMENT

ಕೋವಿಡ್-19‌ ನಿಯಂತ್ರಣ ಕ್ರಮ ತೀವ್ರಗೊಳಿಸಿ: ಕೇಂದ್ರ ತಂಡ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 3:56 IST
Last Updated 4 ಮಾರ್ಚ್ 2021, 3:56 IST

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಮುನ್ಸೂಚನೆಯ ಕಾರಣ ಕೇಂದ್ರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕೋವಿಡ್‌ ನಿಯಂತ್ರಣ ಕ್ರಮಗಳ ಪರಿಶೀಲನೆ ನಡೆಸಿದರು.

ಮೊದಲು ವಿಮಾನ ನಿಲ್ದಾಣದ ಕಣ್ಗಾವಲು ಚಟುವಟಿಕೆ ಪರಿಶೀಲನೆ ನಡೆಸಿ, ಹೊರರಾಜ್ಯದಿಂದ ಸೋಂಕು ಹೆಚ್ಚು ವರದಿಯಾಗಿರುವ ನಗರದ ಸಂಭ್ರಮ್ ಕಾಲೇಜಿಗೆ ಭೇಟಿ ನೀಡಿದರು. ಬಳಿಕ ನಿಮ್ಹಾನ್ಸ್ ಪ್ರಯೋಗಾಲಯ ಮತ್ತು ತುಮಕೂರಿನ ವಿವಿಧೆಡೆ ಭೇಟಿ ನೀಡಿದರು. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಇಲಾಖೆಯ ಹಿರಿಯ ಅಧಿಕಾರಿಗಳಾದ ಗಿರೀಶ್, ರೋಹಿತ್ ಕುಮಾರ್, ನಿಲಾಂಭು ಶರಣ್ ನೇತೃತ್ವದ ತಂಡ ಎರಡು ದಿನ ಪರಿಶೀಲನೆ ನಡೆಸಿದ್ದು, ಗಡಿ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಕಟ್ಟುನಿಟ್ಟಾಗಿ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಹೇಳಿದೆ.

ADVERTISEMENT

ಕೋವಿಡ್ ಲಸಿಕೆ ವಿತರಣೆ ಸಂಬಂಧ ರಾಜ್ಯಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ತಂಡ ಮೆಚ್ಚುಗೆ ವ್ಯಕ್ತಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.