ನಾಗಮಂಗಲ: ಲಾಕ್ಡೌನ್ನಿಂದಾಗಿ ಸಮಸ್ಯೆಗೆ ಸಿಲುಕಿದ್ದ ತಾಲ್ಲೂಕಿನ ಕಡುಬಡವರಿಗಾಗಿ ಪಟ್ಟಣದ ಮಕ್ಬುಲ್ ಅಹಮದ್ ಅವರು ತಮ್ಮ ನಿವೇಶನವನ್ನು ಮಾರಿ, ಬಂದ ಹಣದಿಂದ ದಿನಸಿ ಕಿಟ್ ವಿತರಿಸಿದ್ದಾರೆ.
ಪಟ್ಟಣದ ಮಂಡ್ಯ ರಸ್ತೆಯಲ್ಲಿ ನೆಲೆಸಿರುವ ಅವರು ಅಕ್ಷರ ಕಲಿತವರಲ್ಲ. ಕೂಲಿ ಕಾರ್ಮಿಕರಾಗಿ ಕಠಿಣ ಪರಿಶ್ರಮದಿಂದ ಮುಂದೆ ಬಂದವರು. ಪುರಸಭೆಯ ಮಾಜಿ ಅಧ್ಯಕ್ಷರೂ ಹೌದು.
ಕುಟುಂಬದ ಸದಸ್ಯರ ಆಶಯದಂತೆ ದೇವಲಾಪುರ ಹ್ಯಾಂಡ್ಪೋಸ್ಟ್ ಬಳಿ ಇದ್ದ 30X40 ಅಳತೆಯ ನಿವೇಶನವನ್ನು ₹ 3 ಲಕ್ಷಕ್ಕೆ ಹಾಗೂ ತೋಟದಲ್ಲಿ ಬೆಳೆದಿದ್ದ ತೆಂಗನ್ನು ₹ 1 ಲಕ್ಷಕ್ಕೆ ಮಾರಿ ಬಂದ ಹಣದಿಂದ ಕಡುಬಡವರಿಗೆ ನೆರವಾಗಿದ್ದಾರೆ. ದಿನ ನಿತ್ಯದ ಬಳಕೆಗೆ ಬೇಕಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಕಡಲೆಕಾಳು ಸೇರಿದಂತೆ 8 ಅಗತ್ಯ ವಸ್ತುಗಳನ್ನು ಒಳಗೊಂಡ 500 ದಿನಸಿ ಕಿಟ್ಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳ ಮತ್ತು ಪಟ್ಟಣದ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿರುವ ಅತಿ ಬಡವರನ್ನು ಗುರುತಿಸಿ ಹಂಚಿದ್ದಾರೆ.
‘ಇದು ರಂಜಾನ್ ಮಾಸವಾಗಿದ್ದು, ಬಡವರಿಗೆ ಅದರಲ್ಲೂ ಅಗತ್ಯ ಇರುವವರಿಗೆ ಸಹಾಯ ಮಾಡುವ ಅವಕಾಶವನ್ನು ದೇವರು ಕರುಣಿಸಿದ್ದಾನೆ. ಆದ್ದರಿಂದನನ್ನ ಕೈಲಾದಷ್ಟು ಸಹಾಯವನ್ನು ನಾನುಮತ್ತು ನನ್ನ ಕುಟುಂಬದವರು ಮಾಡುತ್ತಿದ್ದೇವೆ. ಇದನ್ನು ಪುಣ್ಯದ ಕೆಲಸವೆಂದು ಭಾವಿಸುತ್ತೇನೆ’ ಎಂದು ಮಕ್ಬುಲ್ ಹೇಳಿದರು.
‘ಮಕ್ಬುಲ್ ಕಟ್ಟಡ ಕಾರ್ಮಿಕನಾಗಿ ಶ್ರಮಪಟ್ಟು ಬೆಳೆದಿದ್ದಾರೆ. ಹಜ್ ಯಾತ್ರೆಗೆ ಹೋಗುವುದಕ್ಕಾಗಿ ಇಟ್ಟಿದ್ದ ಹಣದಲ್ಲಿ ಬಡವರಿಗೆ ಸಹಾಯ ಮಾಡಿರುವುದು ಶ್ಲಾಘನೀಯ’ ಎಂದು ಸ್ಥಳೀಯರಾದ ಇತಿಹಾಸ ತಜ್ಞ ಕಲೀಂ ಉಲ್ಲಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.