ADVERTISEMENT

Covid-19 Karnataka Update: 2 ಸಾವಿರಕ್ಕೆ ಇಳಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 1:35 IST
Last Updated 4 ಜುಲೈ 2021, 1:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 2,082 ಮಂದಿ ಕೋವಿಡ್ ಪೀಡಿತರಾಗಿರುವುದು ಶನಿವಾರ ದೃಢಪಟ್ಟಿದೆ. ಇವು ಕೋವಿಡ್ ಎರಡನೇ ಅಲೆಯ ಅವಧಿಯಲ್ಲಿ ವರದಿಯಾದ ಕನಿಷ್ಠ ಪ್ರಕರಣಗಳಾಗಿವೆ.

ಕಳೆದ ಮಾರ್ಚ್‌ ಮೂರನೇ ವಾರದ ಬಳಿಕ ಸೋಂಕಿತರ ಸಂಖ್ಯೆ ಏರುಗತಿ ಪಡೆದುಕೊಂಡಿತ್ತು. ಕಳೆದೊಂದು ತಿಂಗಳಿನಿಂದ ಈ ಸಂಖ್ಯೆ ಇಳಿಮುಖ ಮಾಡಿದೆ. ಒಂದು ದಿನದ ಅವಧಿಯಲ್ಲಿ 1.54 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣವು ಶೇ 1.34ಕ್ಕೆ ಇಳಿಕೆಯಾಗಿದೆ. ಮೂರುವರೆ ತಿಂಗಳಲ್ಲಿ ವರದಿಯಾದ ಕನಿಷ್ಠ ದೃಢಪ್ರಮಾಣ ಇದಾಗಿದೆ.

ಬೆಂಗಳೂರಿನಲ್ಲಿ 481, ಮೈಸೂರಿನಲ್ಲಿ 227, ದಕ್ಷಿಣ ಕನ್ನಡದಲ್ಲಿ 214, ಹಾಸನದಲ್ಲಿ 202 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. 15 ಜಿಲ್ಲೆಗಳಲ್ಲಿ ಈ ಸಂಖ್ಯೆ ಎರಡಂಕಿ ಹಾಗೂ 8 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 28.52 ಲಕ್ಷ ದಾಟಿದೆ.

ADVERTISEMENT

ಕೊರೊನಾ ಸೋಂಕಿತರಲ್ಲಿ 86 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮರಣ ಪ್ರಮಾಣ ದರವು ಶೇ 4.13ಕ್ಕೆ ಏರಿಕೆಯಾಗಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ ‌13 ಹಾಗೂ ಬೆಂಗಳೂರಿನಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ 10 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 35,308ಕ್ಕೆ ತಲುಪಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 48,116ಕ್ಕೆ ಇಳಿಕೆಯಾಗಿದೆ. ಸೋಂಕಿತರಲ್ಲಿ 7,751 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 27.68 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.