ಬೆಂಗಳೂರು: ಮೇ 19ರ ಸಂಜೆ 5ರಿಂದ ಮೇ 20ರ ಮಧ್ಯಾಹ್ನ 12ಗಂಟೆವರೆಗೂ ರಾಜ್ಯದಲ್ಲಿ ಕೋವಿಡ್–19 ದೃಢಪಟ್ಟ 63 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ1,458ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಂಕಿನಿಂದ ಈವರೆಗೂ 40 ಮಂದಿ ಸಾವಿಗೀಡಾಗಿದ್ದು, 553 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 864 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 4, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7, ಬೀದರ್ನಲ್ಲಿ 10, ಉತ್ತರ ಕನ್ನಡ 1, ಹಾಸನದಲ್ಲಿ 21, ದಕ್ಷಿಣ ಕನ್ನಡದಲ್ಲಿ 1, ಉಡುಪಿಯಲ್ಲಿ 6, ತುಮಕೂರಿನಲ್ಲಿ 4 ಮತ್ತು ಯಾದಗಿರಿಯಲ್ಲಿ 1 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ.
ಬೆಳಗಾವಿ:ಇಬ್ಬರು ಗುಣಮುಖ,ಆಸ್ಪತ್ರೆಯಿಂದ ಬಿಡುಗಡೆ
ಕೋವಿಡ್-19 ಸೋಂಕು ತಗುಲಿದ್ದ ಮಹಿಳೆ ಸೇರಿದಂತೆ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕಿನ ಕುಡಚಿಯ ಇಬ್ಬರನ್ನು (ರೋಗಿ ಸಂಖ್ಯೆ 575 ಹಾಗೂ 576) ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬೀದರ್: ಒಂದೇ ದಿನ 10 ಮಂದಿಗೆ ಕೋವಿಡ್ 19 ಸೋಂಕು
ಜಿಲ್ಲೆಯಲ್ಲಿ ಒಂದು ವಾರದ ನಂತರ ಬುಧವಾರ ಮತ್ತೆ 10 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 68ಕ್ಕೆ ಏರಿದೆ.
ಈಗಾಗಲೇ ಜಿಲ್ಲೆಯ ಇಬ್ಬರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ. 44 ಪ್ರಕರಣಗಳು ಸಕ್ರಿಯವಾಗಿವೆ. ವಿಶೇಷ ನಿಗಾ ಘಟಕದಲ್ಲಿದ್ದ 21 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್ 19 ಸೋಂಕಿತರನ್ನು ಪತ್ತೆ ಹಚ್ಚುವ ಹಾಗೂ ಪ್ರತ್ಯೇಕಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಕಳೆದ ವಾರ ಓಲ್ಡ್ಸಿಟಿಯ ಒಂದೇ ಓಣಿಯಲ್ಲಿ 13 ಹಾಗೂ ಒಂದೇ ಪ್ರದೇಶದಲ್ಲಿ 23 ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಏಕಕಾಲದಲ್ಲಿ 10 ಜನರಿಗೆ ಸೋಂಕು ತಗುಲಿರುವುದು ಜಿಲ್ಲೆಯ ಜನರ ಆತಂಕ ಹೆಚ್ಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.