ADVERTISEMENT

ಸೇವೆಗಿಂತ ಪ್ರದರ್ಶನ ಮುಖ್ಯವಾಯಿತೇ? ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 16:40 IST
Last Updated 16 ಮೇ 2021, 16:40 IST
ಚಿತ್ರ ಕೃಪೆ: ಸಿದ್ದರಾಮಯ್ಯ, ಟ್ವಿಟರ್ ಖಾತೆ
ಚಿತ್ರ ಕೃಪೆ: ಸಿದ್ದರಾಮಯ್ಯ, ಟ್ವಿಟರ್ ಖಾತೆ   

ಬೆಂಗಳೂರು: ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾದಾಮಿ ಕ್ಷೇತ್ರದ ರೋಗಿಗಳಿಗೆ ನೆರವಾಗಲು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೂರು ಆಂಬುಲೆನ್ಸ್‌ಗಳನ್ನು ಉಚಿತವಾಗಿ ನೀಡಿದ್ದರು.

ಆದರೆ ಆಂಬುಲೆನ್ಸ್ ಮೇಲೆ ಕಾಂಗ್ರೆಸ್ ನಾಯಕಿಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ತಮ್ಮ ಭಾವಚಿತ್ರ ಹಾಕಿರುವ ಸಿದ್ದರಾಮಯ್ಯ ವಿರುದ್ಧ ಬಿಜೆಪಿರಾಜ್ಯ ಘಟಕವು ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ವ್ಯಾಕ್ಸಿನ್ ಮೇಲೆ ಪ್ರಧಾನಿ ಫೋಟೋ ಏಕೆ ಎಂದು ಟ್ವೀಟರ್‌ನಲ್ಲಿ ಪ್ರವಚನ ನೀಡುತ್ತಿದ್ದ ಸಿದ್ದರಾಮಯ್ಯ ಅವರೇ ಇದೇನಿದು!? ನೀಡಿದ ಮೂರು ಆ್ಯಂಬುಲೆನ್ಸ್ ಮೇಲೆ ಸೋನಿಯಾ, ರಾಹುಲ್ ಹಾಗೂ ತಮ್ಮ ಭಾವಚಿತ್ರ ಹಾಕಿ ಗಾಂಧಿ ಕುಟುಂಬಕ್ಕೆ ನಿಷ್ಠೆ ತೋರಿದ್ದೀರಿ. ಸೇವೆಗಿಂತ ಪ್ರದರ್ಶನ ಮುಖ್ಯವಾಯಿತೇ? ಎಂದು ಟೀಕೆ ಮಾಡಿದೆ.

ಕೋವಿಡ್ ಎರಡನೇ ಅಲೆ ಬಂದಾಗಿನಿಂದಲೂ ಮನೆಯಲ್ಲಿ ಬೆಚ್ಚಗೆ ಕುಳಿತಿರುವ ಸಿದ್ದರಾಮಯ್ಯ ಈಗ ಬಾದಾಮಿ ಕ್ಷೇತ್ರದ ಜನತೆಯ ಸಹಾಯಕ್ಕಾಗಿ ಮೂರೇ ಮೂರು ಆ್ಯಂಬುಲೆನ್ಸ್ ನೀಡಿದ್ದಾರೆ. ವಿಪಕ್ಷ ನಾಯಕನಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದೂ ಸಣ್ಣ ಸಹಾಯಕ್ಕೆ ದೊಡ್ಡ ಫೋಟೋ ಅಂಟಿಸಿ ಪ್ರಚಾರ ಪಡೆದಿರುವುದು ನಾಚಿಗೆಯ ಸಂಗತಿ ಎಂದು ಆರೋಪಿಸಿದೆ.

ಈ ಮೊದಲು ಬಾದಾಮಿ ಕ್ಷೇತ್ರಕ್ಕೆ ಉಚಿತವಾಗಿ ಮೂರು ಆಂಬುಲೆನ್ಸ್ ಅನ್ನು ಸಿದ್ದರಾಮಯ್ಯ ಪರವಾಗಿ ಅಧಿಕಾರಿಗಳು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದರು.

ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ N95 ಮಾಸ್ಕ್ ಗಳು, ಪಿಪಿಇ ಕಿಟ್ ಗಳನ್ನು ವಿತರಿಸಲಾಗಿದೆ. ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಲು ಹಾಗೂ ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವವರಿಗೆ ಹೆಲ್ಫ್ ಡೆಸ್ಕ್ ಆರಂಭಿಸಲು ಕ್ಷೇತ್ರದ ಮುಖಂಡರಿಗೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.