ADVERTISEMENT

₹ 3 ಸಾವಿರ ನೆರವಿಗೆ 26 ಸಾವಿರ ಕಲಾವಿದರ ಅರ್ಜಿ

25 ಸಾವಿರ ಕಲಾವಿದರನ್ನು ಅಂತಿಮಗೊಳಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 21:44 IST
Last Updated 9 ಜೂನ್ 2021, 21:44 IST
ಎಸ್. ರಂಗಪ್ಪ
ಎಸ್. ರಂಗಪ್ಪ   

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಸರ್ಕಾರ ಘೋಷಿಸಿದ ₹ 3 ಸಾವಿರ ನೆರವಿಗೆ 26 ಸಾವಿರ ಮಂದಿ ಅರ್ಜಿ ಸಲ್ಲಿಸಿ ದ್ದಾರೆ. ಇದರಲ್ಲಿ 25 ಸಾವಿರ ಕಲಾವಿದರು ನೆರವು ಪಡೆಯಲು ಅರ್ಹರಾಗಿದ್ದಾರೆ. ‌

ರಾಜ್ಯದಲ್ಲಿ ಕೋವಿಡ್‌ ಕಾಣಿಸಿಕೊಂಡಾಗಿನಿಂದ ಸಾಂಸ್ಕೃತಿಕ ಚಟುವಟಿಕೆಗಳು ಸ್ತಬ್ಧ ವಾಗಿವೆ. ಇದರಿಂದಾಗಿ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘ–ಸಂಸ್ಥೆಗಳು ಸಂಕಷ್ಟ ಎದುರಿಸುತ್ತಿವೆ. ಎರಡನೇ ಅಲೆಯ ಬಳಿಕ ಲಾಕ್‌ಡೌನ್‌ ಹೇರಿದ ಸರ್ಕಾರ, ಕಲಾವಿದರು ಸೇರಿದಂತೆ ವಿವಿಧ ವರ್ಗದವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. 16 ಸಾವಿರ ಕಲಾವಿದ ರಿಗೆ ನೆರವು ಒದಗಿಸಲು ₹ 4.82 ಕೋಟಿ ಮಂಜೂರು ಮಾಡಲಾಗಿತ್ತು.

ನಾಟಕ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಶಿಲ್ಪಕಲೆ, ಲಲಿತಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಗುರುತಿಸಿಕೊಂಡಿ ರುವ 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದೇ ರೀತಿ, ಕನಿಷ್ಠ 10 ವರ್ಷಗಳ ಕಲಾ ಸೇವೆ ಮಾಡಿರಬೇಕು. ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು. ಸರ್ಕಾರಿ ನೌಕರಿಯಲ್ಲಿ ಇರಕೂಡದು. 2020–21ನೇ ಸಾಲಿನ ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಧನಸಹಾಯ ಪಡೆ ದಿರಬಾರದು ಎಂಬ ನಿರ್ಬಂಧವನ್ನು ವಿಧಿಸಲಾಗಿತ್ತು. ಇಷ್ಟಾಗಿಯೂ ಸರ್ಕಾರದ ನಿರೀಕ್ಷೆಗೂ ಮೀರಿ ಈ ಬಾರಿ ಅರ್ಜಿಗಳು ಸಲ್ಲಿಕೆಯಾಗಿವೆ.

ADVERTISEMENT

1 ಸಾವಿರ ಅರ್ಜಿ ತಿರಸ್ಕಾರ: ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಸಾವಿರ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಕಳೆದ ವರ್ಷ ಅರ್ಜಿಗಳನ್ನು ಸಂಗ್ರಹಿಸಿ, ಪರಿಷ್ಕರಿಸುವ ಜವಾಬ್ದಾರಿಯನ್ನು ಅಕಾಡೆಮಿಗಳಿಗೆ ನೀಡಲಾಗಿತ್ತು. ಆರ್ಥಿಕವಾಗಿ ಸಬಲರಾಗಿರುವವರನ್ನೂ ಆಯ್ಕೆ ಮಾಡಿ, ಕೆಲ ಅರ್ಹರನ್ನು ಕೈಬಿಡಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿದ್ದವು.

ಈ ಬಾರಿ ಪ್ರತಿ ಜಿಲ್ಲೆಯಲ್ಲೂ ಇಲಾಖೆಯ ಸಹಾಯಕ ನಿರ್ದೇಶಕರನ್ನು ಒಳಗೊಂಡ ಐದು ಜನರ ಸಮಿತಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಅಲ್ಲಿ ಆಯ್ಕೆಯಾದ ಕಲಾವಿದರ ಪಟ್ಟಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲು ಸೂಚಿಸಲಾಗಿತ್ತು. ಸೂಕ್ತ ದಾಖಲಾತಿ ಒದಗಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಕೆಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

‘ಈಗಾಗಲೇ ಮಾಸಾಶನ ಪಡೆಯುತ್ತಿರುವವರು, ಸರ್ಕಾರಿ ನೌಕರಿಯಲ್ಲಿರುವವರು ಕೂಡ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಿದ್ದರು. ಕೆಲವರು ನಿಗದಿಪಡಿಸಲಾದ ಮಾನದಂಡಕ್ಕೆ ಅನ್ವಯವಾಗುತ್ತಿರಲಿಲ್ಲ. ಇನ್ನೂ ಕೆಲವು ಅರ್ಜಿಗಳ ಜತೆಗೆ ಆಧಾರ್ ಸೇರಿದಂತೆ ವಿವಿಧ ಅಗತ್ಯ ಮಾಹಿತಿಗಳನ್ನು ಒದಗಿಸಿರಲಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮುಂದಿನ ಸೋಮವಾರದಿಂದ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಅವರು
ತಿಳಿಸಿದರು.

* ನೆರವಿಗೆ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿದ್ದವು. ಹೀಗಾಗಿ, 16 ಸಾವಿರದ ಬದಲು 25 ಸಾವಿರ ಕಲಾವಿದರಿಗೆ ನೆರವು ಒದಗಿಸಲಾಗುತ್ತಿದೆ. ವಯೋಮಿತಿ ಸಡಿಲಿಕೆ ಪ್ರಸ್ತಾವವನ್ನು ಕೈ ಬಿಡಲಾಗಿದೆ.

-ಎಸ್‌. ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.